ಪ್ರಾಚೀನ ತೀರ್ಥ ಕ್ಷೇತ್ರಗಳಲ್ಲೊಂದಾದ ನೇತ್ರಾವತಿ ಕುಮಾರಧಾರ ನದಿಗಳ ಸಂಗಮ ತೀರದಲ್ಲಿ ನೆಲೆಗೊಂಡಿರುವ ಶ್ರೀಸಹಸ್ರಲಿಂಗೇಶ್ವರನ ಸನ್ನಿಧಿ ಉಪ್ಪಿನಂಗಡಿಯಲ್ಲಿದೆ. ಉತ್ತರದ ಕಾಶಿಯಲ್ಲಿ ಮಹಾಕಾಳಿ ವೀರಭದ್ರ ಸನ್ನಿಧಿಯಿದ್ದು ದಕ್ಷಿಣದ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಕಾಳಿ ಕಾಲಭೈರವ ಸನ್ನಿದಿಯಿದೆ ಆದ್ದರಿಂದ ಈ ಕ್ಷೇತ್ರ ದಕ್ಷಿಣ ಕಾಶಿಯೆಂದು ಪ್ರಖ್ಯಾತವಾಗಿದೆ.
ಇಲ್ಲಿ ಮಹಾಕಾಳಿಗೆ ಒಂದು ಪ್ರತ್ಯೇಕವಾದ ದೇವಸ್ಥಾನವಿದೆ. ತಾಯಿಯು ತನ್ನ ಕೈಯಲ್ಲಿ ಕಪಾಲ, ತ್ರಿಶೂಲ, ಖಡ್ಗ, ಹಿಡಿದು ನಿಂತಿರುತ್ತಾಳೆ. ನದಿಯ ಉತ್ತರಕ್ಕೆ ಕಲ್ಕುಡ ದೈವಸ್ಥಾನವಿದೆ. ದ್ವಾಪರಯುಗದಲಿ ಕುರುಕ್ಷೇತ್ರ ಯುದ್ಧಾನಂತರ ಪಾಂಡವರಲ್ಲಿ ಅಸಂಖ್ಯಾತ ಜೀವ ಬಲಿಯಾದ ಬಗ್ಗೆ ಪಾಪ ಪ್ರಜ್ಞೆ ಕಾಡಿ, ಶ್ರೀ ಕೃಷ್ಣನಲ್ಲಿ ತಮ್ಮ ಅಳಲನ್ನು ತೋಡಿಕೊಂಡಾಗ ರಾಜ ಸೂರ್ಯಾಧ್ವರ ಯಾಗವನ್ನು ಮಾಡುವಂತೆ ಹೇಳುತ್ತಾನೆ. ಯಾಗ ನಿಮಿತ್ತ ಜರಗುವ ಅನ್ನ ಸಂತರ್ಪಣೆಯ ಬಳಿಕ, ಯಾಗ ಮಂಟಪದ ಪರಿಶುದ್ಧತೆ, ನೈರ್ಮಲ್ಯಕ್ಕಾಗಿ ಮಹೇಂದ್ರಗಿರಿಯಲ್ಲಿರುವ ದೇವ ಮೃಗವಾಗಿ ಪುರುಷಮೃಗವನ್ನು ಬರಮಾಡಲು ಶ್ರೀ ಕೃಷ್ಣ ಸೂಚಿಸುತ್ತಾನೆ. ಶ್ರೀಕೃಷ್ಣನಿಂದ ನಿಯೋಜಿಸಲ್ಪಟ್ಟ ಭೀಮಸೇನ ಮಹೇಂದ್ರಗಿರಿಗೆ ವಾಯುಮಾರ್ಗದಲ್ಲಿ ಸಂಚರಿಸುತ್ತಾನೆ.
ತ್ರೇತಾಯುಗದಲ್ಲಿದ್ದ ಹನುಮಂತ ವಾಯು ಕ್ಷೇತ್ರದಲ್ಲಿ ವೃದ್ಧಾಪ್ಯದಿಂದ ಬಳಲಿ ಪವಡಿಸಿರುತ್ತಾನೆ. ಆತನ ಉದ್ಧವಾಗಿ ಚಾಚಿದ ಬಾಲವನ್ನು ದಾಟಲಾಗದ ಭೀಮಸೇನ ಬಾಲವನ್ನು ಸರಿಪಡಿಸುವಂತೆ ಕೇಳಿಕೊಳ್ಳುತ್ತಾನೆ. ಅಗ ಭೀಮನನ್ನೆ ಸರಿಸುವಂತೆ ಆಂಜನೇಯ ತಿಳಿಸಲು ಭೀಮ ತನ್ನ ಭೀಮ ಬಲವನ್ನು ಪ್ರಯೋಗಿಸಿ ಎತ್ತಲು ಪ್ರಯತ್ನಿಸುತ್ತಾನೆ ಆದರೆ ಒಂದಿಂಚು ಕದಲದಿರುವುದನ್ನು ಕಂಡು ಸೋತು ಹನುಮಂತನಲ್ಲೆ ಸರಿಸುವಂತೆ ನಿವೇದಿಸುತ್ತಾನೆ. ಆಗ ಬೀಮ ಬಂದ ಉದ್ದೇಶವನ್ನು ತಿಳಿದು ತನ್ನ ಬಾಲದ ರೋಮಗಳನ್ನು ರಕ್ಷೆಯಾಗಿತ್ತು ಹರಸಿಕಳುಹಿಸುತ್ತಾನೆ ಆಂಜನೇಯ. ಹೀಗೆ ಮಹೇಂದ್ರ ಗಿರಿಯನ್ನು ಸೇರಿದ ಭೀಮ ಪುರುಷಮೃಗವನ್ನು ಭೇಟಿಯಾಗಿ ಬಂದ ಉದ್ದೇಶವನ್ನು ತಿಳಿಸಲು ದೇವ ಮೃಗ ಷರತ್ತನ್ನೊಡ್ಡುತ್ತದೆ. ಮನೋವೇಗದಿಂದ ಸಂಚರಿಸುವ ಪುರುಷಮೃಗದ ಷರತ್ತನ್ನು ಹನುಮ ರೋಮದ ರಕ್ಷೆಯ ಆಧಾರದಲ್ಲಿ ಸ್ವೀಕರಿಸಿ ಭೀಮಸೇನ ತನ್ನ ನಿಶ್ಚಿತ ಗುರಿಯತ್ತ ದೌಡಾಯಿಸುತ್ತಾನೆ. ಹಿಂಬಾಲಿಸಿ ಪುರುಷಮೃಗ ಬೆನ್ನಟ್ಟುತ್ತದೆ. ಆಪತ್ತಿಗೆ ಸಿಲುಕಿದಾಗ ಹನುಮ ರೋಮಗಳನ್ನು ಚೆಲ್ಲುತ್ತಾನೆ.
ಆಗ ಒಂದೊಂದು ರೋಮದಲ್ಲೂ ಒಂದೊಂದು ಶಿವಲಿಂಗ ಉದ್ಭವವಾಗುತ್ತದೆ. ಶಿವಾರ್ಚನೆಯನ್ನು ಮಾಡದೆ ದೇವಮೃಗ ಮುಂದೆ ಸಾಗದು. ಹೀಗೆ ಉಪ್ಪಿನಂಗಡಿಯ ಸಮೀಪಕ್ಕೆ ಬಂದಾಗ ದೇವಮೃಗದ ಕಬಂಧಬಾಹುವಿಗೆ ಸಿಲುಕುವ ಪ್ರಮೇಯ ಬಂದಾಗ ತನ್ನ ಕೈಗಳಲ್ಲಿ ಉಳಿದ ಸಹಸ್ರ ರೋಮಗಳನ್ನು ಬೀಮ ಚೆಲ್ಲುತ್ತಾನೆ. ಸಹಸ್ರರೋಮಗಳಿಂದ ಸಹಸ್ರ ಲಿಂಗಗಳು ಉದ್ಭವವಾಗುತ್ತದೆ.
ಸಹಸ್ರಲಿಂಗಗಳಿಗೆ ಶಿವಾರ್ಚನೆಯನ್ನು ಮಾಡುವ ಸಮಯದಲ್ಲಿ ಭೀಮಸೇನ ಯಾಗ ಮಂಟಪವನ್ನು ಸೇರುತ್ತಾನೆ. ಈಗಲೂ ಸಹಸ್ರಲಿಂಗಗಳು ಭೂತಳದಲ್ಲಿ ಇದೆಯೆನ್ನುವುದು ನಂಬಿಕೆ. ಫೆಬ್ರವರಿ ತಿಂಗಳಲ್ಲಿ ಈ ಲಿಂಗಗಳು ದರ್ಶನಕ್ಕೆ ದೊರಕುತ್ತದೆ. ಪವಿತ್ರ ತೀರ್ಥಕ್ಷೇತ್ರವಾದ ಈ ಸನ್ನಿಧಿಯಲ್ಲಿ ಭಕ್ತಿ ಮುಕ್ತಿಗಳೆರಡೂ ಪ್ರಾಪ್ತಿಯಾಗುತ್ತದೆ. ಮಂಗಳೂರಿನ ಕಡಲತೆರೆಗಳ ಜೊತೆ ಆಟವಾಡಲು ಹೊರಟಿದ್ದರೆ ಬೆಂಗಳೂರು ಮಂಗಳೂರು ಮಾರ್ಗಮದ್ಯದಲ್ಲಿರುವ ಉಪ್ಪಿನಂಗಡಿಯ ಈ ಪವಿತ್ರ ತಾಣಕ್ಕೆ ಬೇಟಿ ನೀಡಿ ಸಹಸ್ರಲಿಂಗೇಶ್ವರನ ದಿವ್ಯ ದರುಶನವನ್ನು ಪಡೆಯಲು ಮರೆಯದಿರಿ.
✍ ಲಲಿತಶ್ರೀ ಪ್ರೀತಂ ರೈ