ಬೆಳ್ತಂಗಡಿ: ಬೈಕ್ ಸವಾರನನ್ನು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಮೂವರು ಯೂಟ್ಯೂಬರ್ ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆ 6ರಂದು ಘಟನೆ ನಡೆದಿದ್ದು, ಈ ಬಗ್ಗೆ ಹರೀಶ್ ನಾಯ್ಕ ಎಂಬವರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ. ತಾನು ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಪಾಂಗಳ ಕ್ರಾಸ್ ಬಳಿ ತಡೆದು ನಿಲ್ಲಿಸಿದ ಯುಟ್ಯೂಬರ್ ಗಳು ತಾವು ಕುಡ್ಲ ರಾಂಪೇಜ್ ನವರು ಎಂದು ಹೇಳಿದ್ದು ಈ ರಸ್ತೆಯ ಪಕ್ಕದಲ್ಲಿ ಹೆಣಗಳನ್ನು ಹೂತು ಹಾಕಿದ್ದೀರಾ ? ಇದರ ಬಗ್ಗೆ ನಿಮಗೆ ಗೊತ್ತಿದೆಯಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಅವರು ಹೆಸರನ್ನು ಕೇಳಿದ್ದು ಈ ವೇಳೆ ನಾವು ಹರೀಶ್ ನಾಯ್ಕ ಎಂದಾಗ ಅವರು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿರುವುದಾಗಿ ಹರೀಶ್ ನಾಯ್ಕ ದೂರು ನೀಡಿದ್ದಾರೆ. ಅದರಂತೆ ಧರ್ಮಸ್ಥಳ ಠಾಣೆಯಲ್ಲಿ 50/2025 00126(2)115(2) 352 ಜೊತೆಗೆ 3(5) ಬಿಎನ್.ಎಸ್. ನಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.