image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಉಪರಾಷ್ಟ್ರಪತಿ ಧನಕರ್ ರಾಜೀನಾಮೆ : ಅಚ್ಚರಿ ಎಂದ ಕಾಂಗ್ರೆಸ್

ಉಪರಾಷ್ಟ್ರಪತಿ ಧನಕರ್ ರಾಜೀನಾಮೆ : ಅಚ್ಚರಿ ಎಂದ ಕಾಂಗ್ರೆಸ್

ಹೊಸದಿಲ್ಲಿ: ಜಗದೀಪ್‌ ಧನ್‌ಕರ್‌ ಅವರು ಉಪರಾಷ್ಟ್ರಪತಿ ಮತ್ತು ರಾಜ್ಯಸಭೆ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪ್ರತಿಪಕ್ಷ ಕಾಂಗ್ರೆಸ್‌ ಈ ಬೆಳವಣಿಗೆಯನ್ನು "ಅಚ್ಚರಿ" ಎಂದು ಬಣ್ಣಿಸಿದೆ. ಅಲ್ಲದೇ ಜಗದೀಪ್ ಧನ್‌ಕರ್ ಅವರ ರಾಜೀನಾಮೆ ವಿಚಾರದಲ್ಲಿ "ಕಣ್ಣಿಗೆ ಕಾಣುತ್ತಿರುವುದಕ್ಕಿಂತ ಹೆಚ್ಚಿನದು ಇದೆ'' ಎಂದು ಕಾಂಗ್ರೆಸ್ ಸೂಚ್ಯವಾಗಿ ಹೇಳಿದೆ. ಸಂಸತ್ತಿನ ಮಾನ್ಸೂನ್ ಅಧಿವೇಶನದ ಮೊದಲ ದಿನವೇ ರಾಜ್ಯಸಭೆ ಸಭಾಪತಿಯೂ ಆಗಿರುವ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ಕಳುಹಿಸಿರುವ ರಾಜೀನಾಮೆ ಪತ್ರದಲ್ಲಿ, "ಆರೋಗ್ಯಕ್ಕೆ ಆದ್ಯತೆ" ನೀಡುವ ಕಾರಣಕ್ಕೆ, ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ಜಗದೀಪ್ ಧನ್‌ಕ‌ರ್ ಸ್ಪಷ್ಟಪಡಿಸಿದ್ದಾರೆ.

ಆದರೆ ಕಾಂಗ್ರೆಸ್ ಜಗದೀಪ್ ಧನ್‌ಕರ್ ಅವರ ರಾಜೀನಾಮೆಗೆ ಕೇವಲ ಆರೋಗ್ಯವೊಂದೇ ಕಾರಣವಾಗಿರಲಾರದು ಎಂದು ಅನುಮಾನ ವ್ಯಕ್ತಪಡಿಸಿದೆ. ಈ ವಿಚಾರದಲ್ಲಿ ಕಣ್ಣಿಗೆ ಕಾಣುವುದಕ್ಕಿಂತ ಹೆಚ್ಚಿನದನ್ನು ಹುಡುಕಲು ಕಾಂಗ್ರೆಸ್ ಹೊರಟಂತಿದ್ದು, ಇದಕ್ಕೆ ಉಪರಾಷ್ಟ್ರಪತಿಗಳ ರಾಜೀನಾಮೆ ಬಗ್ಗೆ ನೀಡಿರುವ ಪ್ರತಿಕ್ರಿಯೆಯೇ ಸಾಕ್ಷಿ ಒದಗಿಸಿದೆ. ಜಗದೀಪ್‌ ಧನ್‌ಕ‌ರ್ ಅವರ ರಾಜೀನಾಮೆ ಕುರಿತು ತಮ್ಮ ಅಧಿಕೃತ ಎಕ್ಸ್ ಪೋಸ್ಟ್‌ನಲ್ಲಿ ಟ್ವಿಟ್ ಮಾಡಿರುವ ಕಾಂಗ್ರೆಸ್ ವಕ್ತಾರ ಮತ್ತು ರಾಜ್ಯಸಭೆ ಸದಸ್ಯ ಜೈರಾಮ್ ರಮೇಶ್, "ಧನ್‌ಕರ್ ದಿಢೀ‌ರ್ ರಾಜೀನಾಮೆ ಅಚ್ಚರಿ ತಂದಿದೆ'' ಎಂದು ಹೇಳಿದ್ದಾರೆ.

''ರಾಜ್ಯಸಭೆ ಸಭಾಪತಿ ಮತ್ತು ಉಪರಾಷ್ಟ್ರಪತಿ ಜಗದೀಪ್ ಧನ್‌ಕ‌ರ್ ತಮ್ಮ ಸ್ಥಾನಕ್ಕೆ ದಿಢೀರ್‌ ರಾಜೀನಾಮೆ ನೀಡಿರುವುದು ವಿವರಿಸಲಾಗದಷ್ಟು ಆಘಾತಕಾರಿಯಾಗಿದೆ. ಇಂದು (ಜುಲೈ 21-ಸೋಮವಾರ) ಸಂಜೆ ಸುಮಾರು 5 ಗಂಟೆಯವರೆಗೆ ನಾನು ಅವರೊಂದಿಗೆ ಹಲವಾರು ಇತರ ಸಂಸದರೊಂದಿಗೆ ಭೇಟಿ ಮಾಡಿದ್ದೆ. ಅಷ್ಟೇ ಅಲ್ಲದೇ ಸಂಜೆ 7:30ಕ್ಕೆ ದೂರವಾಣಿಯಲ್ಲೂ ಅವರೊಂದಿಗೆ ಮಾತನಾಡಿದ್ದೆ. ಜಗದೀಪ್‌ ಧನ್‌ಕ‌ರ್ ಅವರು ತಮ್ಮ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಅವರ ಅನಿರೀಕ್ಷಿತ ರಾಜೀನಾಮೆಯು ಕಣ್ಣಿಗೆ ಕಾಣುವುದಕ್ಕಿಂತ ಹೆಚ್ಚಿನದು ಇದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಆದಾಗ್ಯೂ, ಇದು ಊಹಾಪೋಹಗಳಿಗೆ ಸಮಯವಲ್ಲ. 

ಧನ್‌ಕರ್ ತಮ್ಮ ಅಧಿಕಾರಾವಧಿಯಲ್ಲಿ ಸರ್ಕಾರ ಮತ್ತು ವಿರೋಧ ಪಕ್ಷಗಳೆರಡನ್ನೂ ಸಮಾನವಾಗಿ ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ಅವರ ಸೇವೆಯನ್ನು ಗೌರವಿಸುತ್ತದೆ. ನಾವು ಅವರಿಗೆ ಉತ್ತಮ ಆರೋಗ್ಯವನ್ನು ಬಯಸುತ್ತೇವೆ. ಆದರೆ ಅವರ ನಿರ್ಧಾರವನ್ನು ಮರುಪರಿಶೀಲಿಸುವಂತೆ ವಿನಂತಿಸುತ್ತೇವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಗದೀಪ್ ಧನ್‌ಕ‌ರ್ ಅವರ ಮನಸ್ಸನ್ನು ಬದಲಾಯಿಸುವಂತೆ ಮಾಡುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ. ಇದು ರಾಷ್ಟ್ರದ ಹಿತದೃಷ್ಟಿಯಿಂದ ಇರುತ್ತದೆ. ವಿಶೇಷವಾಗಿ ರೈತ ಸಮುದಾಯವು ಹೆಚ್ಚಿನ ನಿರಾಳತೆಯನ್ನು ಪಡೆಯುತ್ತದೆ" ಎಂದು ಜೈರಾಮ್ ರಮೇಶ್ ತಮ್ಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Category
ಕರಾವಳಿ ತರಂಗಿಣಿ