ಬೆಂಗಳೂರು: ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು ವಿಧಾನ ಪರಿಷತ್ತಿನ ಶೂನ್ಯವೇಳೆಯಲ್ಲಿ ಮಾತನಾಡಿ, ಧರ್ಮಸ್ಥಳ ಗ್ರಾಮದಲ್ಲಿ “ಶವವನ್ನು ಹೂತಿದ್ದೇನೆ” ಎಂದು ಹೇಳಿಕೊಂಡ ವ್ಯಕ್ತಿಯ ಮಂಪರು (ಬ್ರೈನ್ ಮ್ಯಾಪಿಂಗ್) ಪರೀಕ್ಷೆ ನಡೆಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಅನಾಮಿಕ ವ್ಯಕ್ತಿಯೋರ್ವ ಬುರುಡೆ ಹಿಡಿದುಕೊಂಡು “ನಾನು ಧರ್ಮಸ್ಥಳದಲ್ಲಿ 13 ಕಡೆ ನೂರಾರು ಮಹಿಳೆಯರು ಮತ್ತು ಬಾಲಕಿಯರ ಶವವನ್ನು ಹೂತಿದ್ದೇನೆ” ಎಂದು ಹೇಳಿದ ಘಟನೆಗೆ ಸಂಬಂಧಿಸಿದಂತೆ, ಮಂಗಳೂರಿನ ಪೊಲೀಸ್ ಅಧೀಕ್ಷಕರು ಮಂಪರು ಪರೀಕ್ಷೆ ಮಾಡಬೇಕೆಂದು ಮೊದಲು ನಿರ್ಧರಿಸಿದ್ದರು ಎಂಬುದು ಮಾಧ್ಯಮ ವರದಿಗಳಲ್ಲಿ ತಿಳಿದುಬಂದಿತ್ತು. ಆದರೆ, “ಮುಖ್ಯಮಂತ್ರಿಗಳು ಎಡಪಂಥೀಯ ಹಿಂದೂ ವಿರೋಧಿ ಗುಂಪುಗಳ ಒತ್ತಡಕ್ಕೆ ಜಗ್ಗಿ, ಈ ಪ್ರಕರಣವನ್ನು SIT ಗೆ ವಹಿಸುವ ತರಾತುರಿ ನಿರ್ಧಾರ ಕೈಗೊಂಡಿದ್ದಾರೆ” ಎಂದು ಶಾಸಕ ಟೀಕಿಸಿದರು.
ಅವರು ಮುಂದುವರಿದು, “ಶ್ರೀ ಕ್ಷೇತ್ರ ಧರ್ಮಸ್ಥಳವು ಕೋಟಿ ಕೋಟಿ ಭಕ್ತರ ನಂಬಿಕೆಯ ಪುಣ್ಯ ಕ್ಷೇತ್ರ. ಇಂತಹ ವಿಷಯಗಳನ್ನು ಸರಕಾರವು ಗಂಭೀರವಾಗಿ ಪರಿಗಣಿಸಿ, ಸುಳ್ಳು ದೂರು ನೀಡಿದ ವ್ಯಕ್ತಿ ಮತ್ತು ಅವರ ಹಿಂದೆ ನಿಂತಿರುವ ಶಕ್ತಿಗಳ ವಿರುದ್ಧ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು