ಬಿಹಾರ : ಬಿಹಾರ ಚುನಾವಣೆಯ ಮೊದಲ ಹಂತದ ನಾಮಪತ್ರ ಸಲ್ಲಿಕೆಗೆ ಕೇವಲ ನಾಲ್ಕು ದಿನಗಳು ಬಾಕಿ ಇರುವಾಗ, ವಿಪಕ್ಷಗಳ ' ಇಂಡಿಯಾಮೈತ್ರಿಕೂಟ' ಪತನದ ಅಂಚಿನಲ್ಲಿ ನಿಂತಿದೆ. ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಲು ಮೈತ್ರಿಕೂಟದ ಹಿರಿಯ ನಾಯಕರ ನಡುವಿನ ಮಾತುಕತೆಗಳು ಮೊಟಕುಗೊಂಡಿದೆ. ಇದರಿಂದ ಅಸಮಾಧಾನಗೊಂಡ ಆರ್ಜೆಡಿ ನಾಯಕ ಮತ್ತು ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾಗದೆ ದೆಹಲಿಯಿಂದ ಪಾಟ್ನಾಗೆ ಮರಳಿದ್ದಾರೆ. ಸೀಟು ಹಂಚಿಕೆ ಮಾತುಕತೆಯ ಆಂತರಿಕ ಮೂಲಗಳು 'ದ ಫೆಡರಲ್'ಗೆ ತಿಳಿಸಿರುವಂತೆ, ಚರ್ಚೆಯ ಸಮಯದಲ್ಲಿ ಎರಡು ಪ್ರಮುಖ ಅಡೆತಡೆಗಳು ಎದುರಾಗಿ, ಮೈತ್ರಿಕೂಟವನ್ನು ಮುರಿಯುವ ಹಂತಕ್ಕೆ ತಳ್ಳಿವೆ. ಮೊದಲನೆಯದಾಗಿ, ವಿಕಾಸಶೀಲ ಇನ್ಸಾನ್ ಪಾರ್ಟಿ (VIP) ಮುಖ್ಯಸ್ಥ ಮುಕೇಶ್ ಸಹಾನಿ ಅವರು ತಮ್ಮ 30 ಸ್ಥಾನಗಳ ಬೇಡಿಕೆಯನ್ನು ಕಡಿಮೆ ಮಾಡಲು ನಿರಾಕರಿಸಿದ್ದಾರೆ. ಆರ್ಜೆಡಿ ಮತ್ತು ಕಾಂಗ್ರೆಸ್ ಗರಿಷ್ಠ 18 ಸ್ಥಾನಗಳನ್ನು ನೀಡಲು ಸಿದ್ಧವಿದ್ದರೂ, ಸಹಾನಿ ಪಟ್ಟು ಸಡಿಲಿಸಿಲ್ಲ. ಇದು ಸಹಾನಿ ಅವರು ಮೈತ್ರಿಕೂಟದಿಂದ ಹೊರನಡೆಯಲು ಯೋಜಿಸುತ್ತಿದ್ದಾರೆ ಎಂಬ ಚರ್ಚೆಗೆ ಕಾರಣವಾಗಿದೆ. ಸೀಟು ಹಂಚಿಕೆ ಒಪ್ಪಂದ ಅಧಿಕೃತವಾಗುವ ಮೊದಲೇ ಸಹಾನಿ ಅವರು ತಮ್ಮ ಅಭ್ಯರ್ಥಿಗಳಿಗೆ "ಚಿಹ್ನೆಗಳನ್ನು ಹಂಚಲು" ಪ್ರಾರಂಭಿಸಿರುವುದು ಎಲ್ಲಾ ಮಿತ್ರಪಕ್ಷಗಳನ್ನು ಕೆರಳಿಸಿದೆ.
ಮೈತ್ರಿಕೂಟದ ಸ್ಥಿರತೆಗೆ "ಅನಿರೀಕ್ಷಿತ" ಆಘಾತ ನೀಡಿದ್ದು ಸಹಾನಿಯವರ ಚೌಕಾಸಿಯಲ್ಲ. ಅದನ್ನು ಸೋಮವಾರದ ಸಭೆಗೆ ಮೊದಲೇ ಬಹಿರಂಗಗೊಂಡಿತ್ತು ಎಂದು ಮೈತ್ರಿ ನಾಯಕರು ಹೇಳುತ್ತಾರೆ. ಆದರೆ, ಕಾಂಗ್ರೆಸ್ನ ಹಠಾತ್ ನಿಲುವು ಬದಲಾವಣೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಹಲವು ತಿಂಗಳುಗಳಿಂದ ಸಾರ್ವಜನಿಕವಾಗಿ, ನಾವು ಸ್ಥಾನಗಳ ಸಂಖ್ಯೆಯತ್ತ ಗಮನ ಹರಿಸುತ್ತಿಲ್ಲ, ಬದಲಿಗೆ ಕ್ಷೇತ್ರಗಳ ಗುಣಮಟ್ಟವನ್ನು ನೋಡುತ್ತಿದ್ದೇವೆ ಎಂದು ಹೇಳುತ್ತಿದ್ದ ಕಾಂಗ್ರೆಸ್, ಸೋಮವಾರ ಮತ್ತೆ 70 ಸ್ಥಾನಗಳ ಬೇಡಿಕೆ ಮುಂದಿಟ್ಟಿದೆ. "2020ರ ಫಾರ್ಮುಲಾ"ವನ್ನು ಮತ್ತೆ ಮಾತುಕತೆಗೆ ತರಬೇಕೆಂದು ಕಾಂಗ್ರೆಸ್ ಬಯಸಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ನಾಯಕರಾದ ಕೆ.ಸಿ. ವೇಣುಗೋಪಾಲ್, ಬಿಹಾರ ಉಸ್ತುವಾರಿ ಕೃಷ್ಣ ಅಲ್ಲಾವರು ಮತ್ತು ರಾಜ್ಯ ಘಟಕದ ಮುಖ್ಯಸ್ಥ ರಾಜೇಶ್ ರಾಮ್ ಈ ಸಲಹೆಯನ್ನು ಮುಂದಿಟ್ಟ ತಕ್ಷಣವೇ, ತೇಜಸ್ವಿ ಮತ್ತು ಆರ್ಜೆಡಿ ನಾಯಕರಾದ ಸಂಜಯ್ ಯಾದವ್ ಮತ್ತು ಮನೋಜ್ ಝಾ ಅದನ್ನು ತಿರಸ್ಕರಿಸಿದರು. ಚರ್ಚೆಯ ಒಂದು ಹಂತದಲ್ಲಿ, ಕಾಂಗ್ರೆಸ್ 70 ಸ್ಥಾನಗಳಿಗೆ ಪಟ್ಟು ಹಿಡಿಯುವುದು ಅದರ ಕ್ಷೇತ್ರಮಟ್ಟದ ಶಕ್ತಿಗಿಂತ ಮೀರಿದ್ದಾಗಿದೆ ಎಂದು ಆರ್ಜೆಡಿ, ಅಲ್ಲಾವರು ಅವರಿಗೆ ಸ್ಪಷ್ಟವಾಗಿ ಹೇಳಿದೆ. 2020ರಲ್ಲಿ 70 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಕೇವಲ 19 ಸ್ಥಾನಗಳನ್ನು ಗೆದ್ದು, "ಏಕಾಂಗಿಯಾಗಿ ಮಹಾಮೈತ್ರಿ ಸರ್ಕಾರ ರಚನೆಗೆ ಅಡ್ಡಿಯಾಗಿತ್ತು" ಎಂಬುದನ್ನು ಉಲ್ಲೇಖಿಸಿದ ಆರ್ಜೆಡಿ, "ಅದೇ ತಪ್ಪನ್ನು ಪುನರಾವರ್ತಿಸಲು ನಾವು ಸಿದ್ಧರಿಲ್ಲ" ಎಂದು ಕಾಂಗ್ರೆಸ್ ನಾಯಕರಿಗೆ ತಿಳಿಸಿದೆ. ಆರ್ಜೆಡಿ, ಕಾಂಗ್ರೆಸ್ಗೆ "58 ರಿಂದ 60 ಸ್ಥಾನಗಳಿಗಿಂತ ಹೆಚ್ಚು" ಬಿಟ್ಟುಕೊಡಲು ಸಿದ್ಧವಿಲ್ಲ. 10-12 ಸ್ಥಾನಗಳಿಗಾಗಿ ಕಾಂಗ್ರೆಸ್ನ ದುರಹಂಕಾರದ ಧೋರಣೆ ತೋರಿ ಮೈತ್ರಿ ಮುರಿಯುವ ಹಂತಕ್ಕೆ ಹೋಗುತ್ತಿದೆ ಎಂದು ಆರ್ಜೆಡಿ ಮೂಲಗಳು ತಿಳಿಸಿವೆ. ಇದೇ ವಾದವನ್ನು ಆರ್ಜೆಡಿಗೂ ಅನ್ವಯಿಸಬಹುದಲ್ಲವೇ, ಮೈತ್ರಿ ಹಿತಾಸಕ್ತಿಗಾಗಿ ಆ ಹನ್ನೆರಡು ಸ್ಥಾನಗಳನ್ನು ಬಿಟ್ಟುಕೊಡಬಹುದಲ್ಲವೇ ಎಂಬ ವಾದವನ್ನು ತಳ್ಳಿಹಾಕಿದ ಆರ್ಜೆಡಿ ನಾಯಕರೊಬ್ಬರು, ಕಾಂಗ್ರೆಸ್ಗೆ ಹೆಚ್ಚುವರಿ ಸ್ಥಾನಗಳನ್ನು ನೀಡುವುದು ಎಂದರೆ ಆ ಕ್ಷೇತ್ರಗಳಲ್ಲಿ ಎನ್ಡಿಎಗೆ 'ವಾಕೋವರ್' ನೀಡಿದಂತೆ ಎಂದು ಹೋಲಿಸಿದ್ದಾರೆ. 2020ರಲ್ಲಿ ಎನ್ಡಿಎ ಕೇವಲ 15 ಸ್ಥಾನಗಳನ್ನು ಹೆಚ್ಚು ಗೆದ್ದು ಅಧಿಕಾರ ಉಳಿಸಿಕೊಂಡಿತ್ತು. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲುವ ಆತಂಕದ ನಡುವೆಯೂ ಹನ್ನೆರಡು ಹೆಚ್ಚುವರಿ ಸ್ಥಾನಗಳನ್ನು ನೀಡುವುದರಿಂದ 2020ರ ಚುನಾವಣಾ ಫಲಿತಾಂಶ ಪುನರಾವರ್ತನೆಯಾಗಬಹುದು ಎಂದು ಆರ್ಜೆಡಿ ನಂಬಿದೆ.