ಬೆಂಗಳೂರು : ಪ್ರಶ್ನೆಪತ್ರಿಕೆಗಳ ಅನುವಾದ, ಕೀ ಉತ್ತರ ಹಾಗೂ ಆಯ್ಕೆಪಟ್ಟಿ ಬಿಡುಗಡೆ ವಿಳಂಬ ಸೇರಿದಂತೆ, ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಲ್ಲಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಇದೀಗ ಮತ್ತೊಮ್ಮೆ ಸ್ಪರ್ಧಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಒಳ ಮೀಸಲಾತಿ ಜಾರಿ ಕಾರಣಕ್ಕಾಗಿ ಕಳೆದ ಒಂದು ವರ್ಷದಿಂದ ಯಾವುದೇ ನೇಮಕಾತಿಗಳು ನಡೆಯದೆ ಸ್ಪರ್ಧಾರ್ಥಿಗಳು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿದ್ದಾರೆ.
ಸರ್ಕಾರ ಯಾವಾಗ ನೇಮಕಾತಿ ಅಧಿಸೂಚನೆ ಹೊರಡಿಸುತ್ತದೆಯೋ ಎಂದು ಅವರು ಕಾಯುತ್ತಿದ್ದಾರೆ. ಆದರೆ, ಕೆಪಿಎಸ್ಸಿ ಮಾತ್ರ ಕೃಷಿ ಇಲಾಖೆಯ ಅಧಿಕಾರಿಗಳ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿರುವುದು, ಪ್ರತಿಬಾರಿಯಂತೆ ಈ ಬಾರಿಯೂ ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸಿದೆ. ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರಗಳು ವೈಜ್ಞಾನಿಕ ದತ್ತಾಂಶ ಆಧರಿಸಿ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡಬಹುದು ಎಂದು 2024ರ ಆಗಸ್ಟ್ 1ರಂದು ತೀರ್ಪು ನೀಡಿತ್ತು. ಈ ತೀರ್ಪಿನ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರವು ನ್ಯಾ. ನಾಗಮೋಹನ್ದಾಸ್ ಆಯೋಗದ ವರದಿಯಂತೆ ಎಡಗೈ ಸಮುದಾಯಕ್ಕೆ ಶೇ. 6, ಬಲಗೈ ಸಮುದಾಯಕ್ಕೆ ಶೇ. 6 ಹಾಗೂ ಇತರೆ ಸ್ಪೃಶ್ಯ ಮತ್ತು ಅಲೆಮಾರಿ ಸಮುದಾಯಗಳಿಗೆ ಶೇ. 5ರಷ್ಟು ಒಳ ಮೀಸಲಾತಿ ಜಾರಿಗೊಳಿಸಿತ್ತು. ಈ ಮೀಸಲಾತಿ ಅನ್ವಯವೇ ಮುಂದಿನ ನೇಮಕಾತಿಗಳು ನಡೆಯಬೇಕು ಎಂದು ಆದೇಶಿಸಲಾಗಿದೆ. ಕೆಪಿಎಸ್ಸಿ, 2024ರ ಸೆಪ್ಟೆಂಬರ್ 20ರಂದು ಕೃಷಿ ಇಲಾಖೆಯಲ್ಲಿ 'ಬಿ' ವೃಂದದ 945 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿತ್ತು. ನಂತರ, ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅಧಿಸೂಚನೆಯನ್ನು ರದ್ದುಗೊಳಿಸಿತ್ತು. ಆದರೆ, ಸರ್ಕಾರವು ಕ್ರೀಡಾ ಸಾಧಕರಿಗೆ ಶೇ. 2ರಷ್ಟು ಮೀಸಲಾತಿ ನೀಡಿ ಹೊಸ ಆದೇಶ ಹೊರಡಿಸಿದ್ದರಿಂದ, ಅಧಿಸೂಚನೆಯನ್ನು ಮತ್ತೊಮ್ಮೆ ತಿದ್ದುಪಡಿ ಮಾಡಿ ಅರ್ಜಿ ಆಹ್ವಾನಿಸಿತ್ತು. ಇದೀಗ ಕಲ್ಯಾಣ ಕರ್ನಾಟಕದ ಹುದ್ದೆಗಳಿಗೆ ಸೆಪ್ಟೆಂಬರ್ 6 ಮತ್ತು 7ರಂದು ಹಾಗೂ ಕಲ್ಯಾಣ ಕರ್ನಾಟಕೇತರ ಹುದ್ದೆಗಳಿಗೆ ಸೆಪ್ಟೆಂಬರ್ 27 ಮತ್ತು 28ರಂದು ಪರೀಕ್ಷೆ ನಡೆಸಲು ಕೆಪಿಎಸ್ಸಿ ತೀರ್ಮಾನಿಸಿದೆ. ಆದರೆ, ಇದಕ್ಕೂ ಮೊದಲು 2024ರ ಫೆಬ್ರವರಿಯಲ್ಲಿ ಹೊರಡಿಸಿದ್ದ ಭೂಮಾಪಕ ಹುದ್ದೆಗಳ ಅಧಿಸೂಚನೆ ಮತ್ತು ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯನ್ನು ಒಳ ಮೀಸಲಾತಿ ಕಾರಣ ನೀಡಿ ಸ್ಥಗಿತಗೊಳಿಸಿದೆ. ಹೀಗಿರುವಾಗ ಕೃಷಿ ಇಲಾಖೆಯ ಹುದ್ದೆಗಳಿಗೆ ಮಾತ್ರ ಪರೀಕ್ಷೆ ನಡೆಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.