image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕರ್ನಾಟಕ ಪೊಲೀಸ್ ಇಲಾಖೆ ಇಡೀ ರಾಷ್ಟ್ರದಲ್ಲಿ ಪ್ರಖ್ಯಾತಿಯನ್ನು ಪಡೆದಿದೆ ಎಂದ ಪರಮೇಶ್ವರ್

ಕರ್ನಾಟಕ ಪೊಲೀಸ್ ಇಲಾಖೆ ಇಡೀ ರಾಷ್ಟ್ರದಲ್ಲಿ ಪ್ರಖ್ಯಾತಿಯನ್ನು ಪಡೆದಿದೆ ಎಂದ ಪರಮೇಶ್ವರ್

ಬೆಂಗಳೂರು : ರಾಜ್ಯವನ್ನು ಶಾಂತಿಯಿಂದಿ ಇಡುವುದರಲ್ಲಿ ಪೊಲೀಸ್ ಇಲಾಖೆಯು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ವಿಶೇಷವಾಗಿ ಜನಸಮುದಾಯದ ನಿರೀಕ್ಷೆಯಲ್ಲಿ ತನ್ನ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದೆ ಎಂದು ಗೃಹ ಸಚಿವ ಡಾ.‌ ಜಿ. ಪರಮೇಶ್ವರ್ ಅವರು ಹೇಳಿದರು. ರಾಜಭವನದ ಗಾಜಿನ ಮನೆಯಲ್ಲಿ ಇಂದು ನಡೆದ ಕರ್ನಾಟಕ ರಾಜ್ಯ ಗೃಹ ಇಲಾಖೆಯಲ್ಲಿ ವಿಶಿಷ್ಟ ಹಾಗೂ ಅಗ್ರಗಣ್ಯ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಮಾನ್ಯ ಗೌರವಾನ್ವಿತ ರಾಜ್ಯಪಾಲರಿಂದ 'ರಾಷ್ಟ್ರಪತಿಗಳ ಪೊಲೀಸ್ ಪದಕ ಪ್ರದಾನ' ಹಾಗೂ 'ಕೇಂದ್ರ ಗೃಹ ಮಂತ್ರಿಗಳ ಪದಕ ಪ್ರದಾನ' ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಶಸ್ತಿ ಎಂಬುದು‌ ಬರೀ ಪದಕವಲ್ಲ. ಅದರ ಹಿಂದೆ ಶ್ರಮ, ಪ್ರಾಮಾಣಿಕತೆ, ಸಮಾಜದ ಸೇವೆ ಮತ್ತು ಮುಂದಿನ ಪೀಳಿಗೆಗೆ ಆದರ್ಶ ಇದೆ. ಕರ್ನಾಟಕ ಪೊಲೀಸ್ ಇಲಾಖೆ ಇಡೀ ರಾಷ್ಟ್ರದಲ್ಲಿ ಪ್ರಖ್ಯಾತಿಯನ್ನು ಪಡೆದಿದೆ. ಪೊಲೀಸ್ ಇಲಾಖೆಯನ್ನು ನಡೆಸುವುದಕ್ಕೆ ನನಗೆ ಬಹಳ ಹೆಮ್ಮೆಯಿದೆ ಎಂದರು. ರಾಜ್ಯದ ಅಭಿವೃದ್ಧಿಯಾಗಬೇಕಾದರೆ ಸಮಾಜ ಶಾಂತಿಯಿಂದ ಇರಬೇಕಾಗುತ್ತದೆ. ನಾಗರಿಕ ಸಮಾಜ ಶಾಂತಿಯಿಂದ ಇರಬೇಕಾಗುತ್ತದೆ. ಇತ್ತೀಚೆಗೆ ನಾವು ಗಮನಿಸಿದಾಗ, ಗ್ಲೋಬಲ್ ಇನ್‌ವೆಸ್ಟರ್ಸ್ ಮೀಟ್‌ನಲ್ಲಿ ರೂ. 10500 ಲಕ್ಷ ಕೋಟಿಗೂ ಹೆಚ್ಚು ಬಂಡವಾಳ ಹೂಡುತ್ತೇವೆ ಎಂದು ಪ್ರಪಂಚದಾದ್ಯಂತ ನೂರಾರು ಕಂಪನಿಗಳು ಬಂದವು. ಮುಖ್ಯಮಂತ್ರಿಗಳು, ಕೈಗಾರಿಕಾ ಸಚಿವರು ಹಲವು ಒಡಂಬಡಿಕೆಗಳಿಗೆ ಸಹಿ ಹಾಕಿದರು. ಅದಕ್ಕೆ ಮೂಲ ಕಾರಣ, ಯಾವುದೇ ಒಂದು ಕಂಪನಿ ರಾಜ್ಯದಲ್ಲಿ ಅಥವಾ ರಾಷ್ಟ್ರದಲ್ಲಿ ಬಂಡವಾಳ ಹೂಡಬೇಕಾದರೆ ಆ ರಾಜ್ಯದ ಸಮಾಜವನ್ನು ನೋಡುತ್ತಾರೆ. ರಾಜಕೀಯ ಇಚ್ಛಾಶಕ್ತಿ, ಆ ಸಮಾಜದಲ್ಲಿ ಶಾಂತಿ ಇದೆಯಾ? ಎಂಬುದನ್ನು ಕಂಪನಿಗಳು ನೋಡುತ್ತವೆ. ಕರ್ನಾಟಕದ‌ ಮಟ್ಟಿಗೆ ರೂ. 10 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ಬರುತ್ತದೆ ಎಂದರೆ ಕರ್ನಾಟಕದಲ್ಲಿ ಶಾಂತಿ, ನೆಮ್ಮದಿ, ತೃಪ್ತಿ ಇದೆ. ಯಾವುದೇ ತೊಂದರೆಗಳು ಆಗುವುದಿಲ್ಲ ಎಂಬುದನ್ನು ಗಮನಿಸಿಯೇ ಬಂಡವಾಳ ಹೂಡುತ್ತಾರೆ.‌ ಇದಕ್ಕೆ ನಮ್ಮ ಪೊಲೀಸ್ ಇಲಾಖೆಯೂ ಕಾರಣ ಎಂದು ಗೃಹ ಸಚಿವರು ಹೇಳಿದರು. ಇತ್ತೀಚೆಗೆ ಸಮಾಜವನ್ನು ಕೆಡಿಸುವಂಥ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಧಾರ್ಮಿಕವಾಗಿ, ರಾಜಕೀಯವಾಗಿ ಬೇರೆ ರೀತಿಯಲ್ಲಿ ಸಮಾಜದ ಶಾಂತಿಯನ್ನು ಕೆಡಿಸುವಂತದ್ದನ್ನು ಗಮನಿಸುತ್ತಿದ್ದೇವೆ. ಕರ್ನಾಟಕ ಪೊಲೀಸ್ ಪ್ರತಿಯೊಂದು ಸಂದರ್ಭದಲ್ಲಿ ಯಶಸ್ವಿಯಾಗುತ್ತಿದೆ. ಯಾವುದೇ ತನಿಖೆ, ಅಪರಾಧ, ಕೊಲೆ ಪ್ರಕರಣಗಳನ್ನು ಪತ್ತೆ ಹಚ್ಚುವುದರಲ್ಲಿ ರಾಜ್ಯ ಪೊಲೀಸ್ ಯಶಸ್ವಿಯಾಗಿದೆ. ಇಂತಹ ಸೂಕ್ಷ್ಮ ಇಲಾಖೆ ಸ್ವಾಭಾವಿಕವಾಗಿ ಹಲವು ಟೀಕೆ- ಟಿಪ್ಪಣಿಗಳಿಗೆ ಗುರಿಯಾಗುತ್ತದೆ. ಟೀಕೆಗಳನ್ನು ಮೀರಿ ಇಲಾಖೆಯ ಸಿಬ್ಬಂದಿ ಕೆಲಸ‌ ಮಾಡುತ್ತಿದ್ದಾರೆ ಎಂದರು.

ಅನೇಕ‌ ಸಂದರ್ಭಗಳಲ್ಲಿ ಕರ್ತವ್ಯದ ವೇಳೆ‌ ಅಧಿಕಾರಿ ಮತ್ತು ಸಿಬ್ಬಂದಿ ಪ್ರಾಣ‌ ಕಳೆದುಕೊಂಡಿದ್ದಾರೆ. ಅವರಿಗೆ ಸಾಂತ್ವನ ಹೇಳಬಯಸುತ್ತೇನೆ. ಕರ್ತವ್ಯದ ವೇಳೆ ಅಪರಾಧಿ ಯಾವ ರೀತಿ ಪ್ರತಿಕ್ರಿಯಿಸುತ್ತಾನೆ ಎಂಬುದು ಗೊತ್ತಿರುವುದಿಲ್ಲ.‌ ಪೊಲೀಸರು ಪ್ರಾಣ ಪಣಕ್ಕಿಟ್ಟು ಕೆಲಸ ಮಾಡುವ ಸಂದರ್ಭಗಳನ್ನು ನೋಡಿದ್ದೇವೆ ಎಂದು ತಿಳಿಸಿದರು. ಪೊಲೀಸರ ನಿಸ್ವಾರ್ಥ ಸೇವೆ ಬೇರೆಯವರಿಗೆ ಸ್ಪೂರ್ತಿಯಾಗಲಿ. ಇಂದು ತೆಗೆದುಕೊಂಡಿರುವ ಪದಕಗಳು‌ ಅತ್ಯಂತ ಶ್ಲಾಘನೀಯ. ಮುಂದಿನ ಪೀಳಿಗೆಗೆ ಆದರ್ಶವಾಗಲಿ. ನಿಮ್ಮಂತೆ ಸೇವೆ ಮಾಡಿ ರಾಜ್ಯಕ್ಕೆ ಮತ್ತು ಇಲಾಖೆಗೆ ಕೀರ್ತಿಯನ್ನು ತರಲಿ ಎಂದು ಸಿಬ್ಬಂದಿಯನ್ನು ಜಿ ಪರಮೇಶ್ವರ್ ಹುರಿದುಂಬಿಸಿದರು. ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ, ಎಡಿಜಿಪಿ ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿರುವ ಕೆ. ವಿ. ಶರತ್ ಚಂದ್ರ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿರುವ ಸೀಮಂತ್ ಕುಮಾರ್ ಸಿಂಗ್ ಹಾಗೂ ಸಂವಹನ & ಆಧುನೀಕರಣ ವಿಭಾಗದ ಎಡಿಜಿಪಿ ಎಸ್. ಮುರುಗನ್ ಅವರಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಪ್ರದಾನ ಮಾಡಲಾಯಿತು. ಪೂರ್ವ ವಲಯದ ಐಜಿಪಿಯಾಗಿರುವ ಡಾ. ಬಿ. ಆರ್ ರವಿಕಾಂತೇಗೌಡ, ಸಿಐಡಿಯ ಡಿವೈಎಸ್‌ಪಿ ಯಶವಂತ್ ಕುಮಾರ್ ಮತ್ತಿತರ ಅಧಿಕಾರಿ ಮತ್ತು ಸಿಬ್ಬಂದಿ ಶ್ಲಾಘನೀಯ ಸೇವಾ ಪದಕ ಗೌರವಕ್ಕೆ ಭಾಜನರಾದರು.

Category
ಕರಾವಳಿ ತರಂಗಿಣಿ