image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕಚೇರಿಯಲ್ಲಿಯೇ ಕೂರದೇ ಆಗಾಗ ಕಾಡಿಗೆ ಭೇಟಿ ನೀಡಿ : ಸಿ ಎಂ

ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕಚೇರಿಯಲ್ಲಿಯೇ ಕೂರದೇ ಆಗಾಗ ಕಾಡಿಗೆ ಭೇಟಿ ನೀಡಿ : ಸಿ ಎಂ

ಬೆಂಗಳೂರು: 'ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕಚೇರಿಯಲ್ಲಿಯೇ ಕೂರದೇ ಆಗಾಗ ಕಾಡಿಗೆ ಭೇಟಿ ನೀಡಿ ಸಮಸ್ಯೆಗಳಿಗೆ ಸ್ಪಂದಿಸಬೇಕು. ವನ್ಯಜೀವಿಗಳು ಕಾಡಿನಿಂದ ಹೊರ ಬಾರದಂತೆ ತಡೆಯಲು ಅಲ್ಲಿಯೇ ಆಹಾರ ಲಭ್ಯವಾಗುವಂತೆ ನೋಡಿಕೊಳ್ಳಬೇಕು ́ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು. ನಗರದ ಮಲ್ಲೇಶ್ವರದಲ್ಲಿರುವ ಅರಣ್ಯಭವನದಲ್ಲಿ ಗುರುವಾರ ನಡೆದ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ಕರ್ನಾಟಕದಲ್ಲಿ ಹುಲಿ, ಚಿರತೆ, ಆನೆ ಸಹಿತ ಇತರೆ ಪ್ರಾಣಿಗಳು ಹೊರ ಬಂದು ದಾಳಿ ಮಾಡುವುದರಿಂದ ಸಾವಿನ ಸಂಖ್ಯೆ, ಮಾನವ ವನ್ಯಜೀವಿಗಳ ಸಂಘರ್ಷ ಹೆಚ್ಚಾಗಿದೆ. ಆಹಾರ, ನೀರು ಅಲ್ಲಿಯೇ ಸಿಕ್ಕರೆ ಪ್ರಾಣಿಗಳು ಹೊರಕ್ಕೆ ಬರುವುದಿಲ್ಲ. ವಿಶೇಷವಾಗಿ ಆನೆಗಳಿಗೆ ಈ ವ್ಯವಸ್ಥೆ ಮಾಡಿದರೆ ಸಂಘರ್ಷ ತಗ್ಗಿಸಬಹುದು ́ ಎಂದರು. 'ಕಾಡಾನೆಗಳ ನಿಗ್ರಹಕ್ಕೆ ಅರಣ್ಯದಂಚಿನಲ್ಲಿ ನಿರ್ಮಿಸಿರುವ ಕಂದಕಗಳಲ್ಲಿ ಬಿದ್ದ ಹೂಳನ್ನು ಇಲಾಖೆಯವರು ಸರಿಯಾಗಿ ತೆಗೆಸುತ್ತಿಲ್ಲ. ನಿರ್ವಹಣೆಯನ್ನೂ ಮಾಡದೇ ಇದ್ದರೆ ಕಂದಕಗಳು ಉಪಯೋಗ ಆಗುವುದಾದರೂ ಹೇಗೆʼ ಎಂದು ಪ್ರಶ್ನಿಸಿದರು. 'ಈವರೆಗೂ ಕೋಟ್ಯಂತರ ಸಸಿಗಳನ್ನು ನೆಟ್ಟಿರಬಹುದು. ಆದರೆ, ಕರ್ನಾಟಕದಲ್ಲಿ ಅರಣ್ಯ ಪ್ರಮಾಣ ನಿರೀಕ್ಷೆಯಷ್ಟು ಹೆಚ್ಚಾಗಿಲ್ಲ. ಈಗಲೂ ಅರಣ್ಯ ಪ್ರದೇಶ ಶೇ 20ರಷ್ಟು ಮಾತ್ರ ಇದೆ ́ ಎಂದು ಬೇಸರ ವ್ಯಕ್ತಪಡಿಸಿದರು. 'ಅರಣ್ಯ ಸೇವೆಯಲ್ಲಿರುವಾಗಲೇ ಅಧಿಕಾರಿ, ಸಿಬ್ಬಂದಿ ಸಹಿತ 62 ಮಂದಿ ಹುತಾತ್ಮರಾಗಿದ್ದಾರೆ. ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದರೂ ಕಳೆದುಕೊಂಡವರನ್ನು ಹಿಂತಿರುಗಿಸಲಾಗದು. ಇಲಾಖೆಯಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಿದರೆ ಜೀವಹಾನಿ ತಪ್ಪಿಸಬಹುದು ́ ಎಂದು ತಿಳಿಸಿದರು. ಸಿದ್ದರಾಮಯ್ಯ, ಮುಖ್ಯಮಂತ್ರಿಕಾಡಿನಲ್ಲಿ ಈಗ ವೀರಪ್ಪನ್‌ಗಳು ಇಲ್ಲ. ಆದರೆ ಸಣ್ಣಪುಟ್ಟ ಕಾಡುಗಳ್ಳರು ದುಷ್ಟರು ಬೇಟೆಯಾಡುವವರನ್ನು ಅರಣ್ಯ ಇಲಾಖೆ ನಿಗ್ರಹಿಸಬೇಕು.

ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, 'ಬೆಂಗಳೂರಿನ ಮಾದಪ್ಪನಹಳ್ಳಿಯಲ್ಲಿ 153 ಎಕರೆಯಲ್ಲಿ ವಿಶಾಲ ಉದ್ಯಾನ ನಿರ್ಮಿಸಲು ಅಕ್ಟೋಬರ್‌ ಮೊದಲ ವಾರ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ ́ ಎಂದು ತಿಳಿಸಿದರು. ಕರ್ನಾಟಕ ಅರಣ್ಯ ಪಡೆಗಳ ಮುಖ್ಯಸ್ಥೆ ಮೀನಾಕ್ಷಿ ನೇಗಿ ಮತ್ತಿತರರು ಹಾಜರಿದ್ದರು.

Category
ಕರಾವಳಿ ತರಂಗಿಣಿ