ಕೆಜಿಎಫ್: ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ವೇಳೆ ತಾಂತ್ರಿಕ ಅಡಚಣೆ ಎದುರಾಗಿದ್ದು, ಸಮೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಹತ್ತಾರು ಶಿಕ್ಷಕರು ತಾಲ್ಲೂಕು ಕಚೇರಿಗೆ ಬಂದು, ತಾಂತ್ರಿಕ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು. ಶಿಕ್ಷಕರು ಅಳವಡಿಸಿಕೊಂಡ ಆಯಪ್ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಎಲ್ಲ ಸರಿಯಿದ್ದರೆ ಕೇವಲ ಹದಿನೈದು ನಿಮಿಷದಲ್ಲಿ ಒಂದು ಮನೆಯ ಸಂಪೂರ್ಣ ಸಮೀಕ್ಷೆ ಮಾಡಬಹುದು. ಆದರೆ, ಆಯಪ್ನಲ್ಲಿ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ. ನಗರದ ಸ್ವರ್ಣ ನಗರ ಬಡಾವಣೆಯಲ್ಲಿ ನಿಯೋಜನೆಗೊಂಡ ಶಿಕ್ಷಕರ ತಂಡಕ್ಕೆ ಮ್ಯಾಪ್ನಲ್ಲಿ ಆಂಧ್ರಪ್ರದೇಶದ ಗಡಿ ತೋರಿಸುತ್ತಿದೆ. ಇದೇ ರೀತಿಯ ಸಮಸ್ಯೆಗಳನ್ನು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಮೀಕ್ಷೆ ನಡೆಸುತ್ತಿರುವ ಶಿಕ್ಷಕರು ಎದುರಿಸುತ್ತಿದ್ದಾರೆ. ಕೂಡಲೇ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಶಿಕ್ಷಕರು, ತಹಶೀಲ್ದಾರ್ ಮತ್ತು ಸಮಾಜ ಕಲ್ಯಾಣ ಇಲಾಖೆ ನೋಡಲ್ ಅಧಿಕಾರಿಗಳನ್ನು ಒತ್ತಾಯಿಸಿದರು. ಮೊಬೈಲ್ ಆಯಪ್ನಲ್ಲಿನ ಸಮಸ್ಯೆಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿದ್ದ ಶಿಕ್ಷಕರು ಮಧ್ಯಾಹ್ನವಾದರೂ ಸಮೀಕ್ಷೆಗೆ ಹೋಗಲೇ ಇಲ್ಲ. ಸಮಸ್ಯೆ ನಮ್ಮಲ್ಲಿ ಆಗಿಲ್ಲ. ಕೇಂದ್ರ ಕಚೇರಿಯಿಂದಲೇ ಸಮಸ್ಯೆ ಉಂಟಾಗಿದೆ. ಅದನ್ನು ನಿವಾರಿಸಲು ಯತ್ನಿಸಲಾಗುತ್ತಿದೆ ಎಂದು ತಹಶೀಲ್ದಾರ್ ಭರತ್ ಶಿಕ್ಷಕರಿಗೆ ಭರವಸೆ ನೀಡಿದರು. ಮಧ್ಯಾಹ್ನದ ನಂತರ ಆಪ್ ಕೆಲಸ ಮಾಡಿದೆ. ಪ್ರಗತಿಯನ್ನು ಸಾಧಿಸಲಾಗುತ್ತಿದೆ ಎಂದು ತಹಶೀಲ್ದಾರ್ ಎಚ್.ಜೆ.ಭರತ್ ಹೇಳಿದ್ದಾರೆ.