ಬೆಂಗಳೂರು : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿಗಣತಿ) ಆಮೆಗತಿಯ ಪ್ರಗತಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿ ಗುರಿ ನಿಗದಿಪಡಿಸಿದ ಬೆನ್ನಲ್ಲೇ ಸಮೀಕ್ಷಾ ಕಾರ್ಯ ಚುರುಕುಗೊಂಡಿದ್ದು, ಭಾನುವಾರ 12 ಲಕ್ಷ ಕುಟುಂಬಗಳ ಸಮೀಕ್ಷೆ ನಡೆಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸಭೆ ನಡೆಸಿ ನಿಗದಿಪಡಿಸಿದ್ದ (11.85 ಲಕ್ಷ) ನಿತ್ಯ ಸಮೀಕ್ಷಾ ಗುರಿ ನಿಗದಿಪಡಿಸಿದ್ದರು. ಇದರ ಗುರಿಯನ್ನು ಮೀರಿ ಭಾನುವಾರ ಸಾಧನೆ ಮಾಡಲಾಗಿದ್ದು, ಶೇ.10ರ ಬದಲು ಸುಮಾರು ಶೇ.11ರಷ್ಟು ಮನೆಗಳ ಸಮೀಕ್ಷೆಯನ್ನು ಒಂದೇ ದಿನ ನಡೆಸಲಾಗಿದೆ. ಇದರೊಂದಿಗೆ ಈವರೆಗೆ ಒಟ್ಟು 26 ಲಕ್ಷ ಕುಟುಂಬಗಳ 90 ಲಕ್ಷ ಮಂದಿ ವಿವರ ದಾಖಲು ಮಾಡಿದಂತಾಗಿದೆ.
ಸೆ.22 ರಿಂದ ಆರಂಭವಾದ ಸಮೀಕ್ಷೆಯಲ್ಲಿ ಸರ್ವರ್, ನೆಟ್ವರ್ಕ್, ಆಯಪ್ ಸಮಸ್ಯೆ ಸೇರಿ ಹಲವು ಕಾರಣಗಳನ್ನು ಮೊದಲ ಐದು ದಿನ ಕೇವಲ 4.36 ಲಕ್ಷ ಕುಟುಂಬಗಳ ಸಮೀಕ್ಷೆ ನಡೆಸಲಾಗಿತ್ತು. ಈ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒಗಳೊಂದಿಗೆ ವರ್ಚುಯಲ್ ಸಭೆ ನಡೆಸಿ, ಸೆ.27 ರಿಂದ ಅ.7 ರವರೆಗೆ ಒಟ್ಟು ಸಮೀಕ್ಷಾ ಗುರಿಯ ಶೇ.10ರಷ್ಟು ಕುಟುಂಬಗಳ ಸಮೀಕ್ಷೆ ನಡೆಸಬೇಕು. ಅರ್ಥತ್ ನಿತ್ಯ ಕಡ್ಡಾಯವಾಗಿ 11,85,623 ಕುಟುಂಬಗಳ ಸಮೀಕ್ಷೆ ಪೂರ್ಣಗೊಳಿಸಬೇಕು ಎಂದು ತಿಳಿಸಿದ್ದರು. ಸಿದ್ದರಾಮಯ್ಯ ಅವರ ಎಚ್ಚರಿಕೆ ಬೆನ್ನಲ್ಲೇ ಶನಿವಾರ ಒಂದೇ ದಿನ 9 ಲಕ್ಷಕ್ಕೂ ಹೆಚ್ಚು ಕುಟುಂಬಗಳ ಸಮೀಕ್ಷೆ ನಡೆಸಿದ್ದರು. ಭಾನುವಾರ ಸಮೀಕ್ಷೆಗೆ ಮತ್ತಷ್ಟು ವೇಗ ನೀಡಿದ್ದು, ಸಂಜೆ 5 ಗಂಟೆಗೆ 10 ಲಕ್ಷ ಮನೆಗಳ ಸಮೀಕ್ಷೆ ನಡೆಸಿರುವುದಾಗಿ ಮುಖ್ಯಮಂತ್ರಿಗಳ ಕಚೇರಿ ಪ್ರಕಟಿಸಿತ್ತು. ಬಳಿಕ ಸಂಜೆ 7 ಗಂಟೆಗೆ ಹಿಂದುಳಿದ ವರ್ಗಗಳ ಆಯೋಗ ನೀಡಿರುವ ಅಂಕಿ-ಅಂಶಗಳ ಪ್ರಕಾರ 12 ಲಕ್ಷ ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ.
ಬೆಂಗಳೂರು ನಗರ ಹೊರತುಪಡಿಸಿ ರಾಜ್ಯದಲ್ಲಿ ಒಟ್ಟು 1.43 ಕೋಟಿ ಮನೆಗಳನ್ನು ಸಮೀಕ್ಷೆಗೆ ಗುರುತಿಸಲಾಗಿದೆ. ಇದಕ್ಕಾಗಿ 1,19,213 ಗಣತಿದಾರರನ್ನು ನಿಯೋಜಿಸಿದ್ದು 1,21,714 ಬ್ಲಾಕ್ಗಳನ್ನು ಗುರುತಿಸಲಾಗಿತ್ತು. ಮೊದಲ ಮೂರ್ನಾಲ್ಕು ದಿನಗಳು ಸಮೀಕ್ಷಾ ಆಯಪ್ ಲಾಗ್ಇನ್, ಸರ್ವರ್, ನೆಟ್ವರ್ಕ್ ಮತ್ತಿತರ ಸಮಸ್ಯೆಗಳಿಂದ ಮಂದಗತಿಯಲ್ಲಿ ಗಣತಿ ನಡೆಯಿತು. ಅದರಲ್ಲೂ ಕೆಲವರು ಇದೇ ನೆಪದಲ್ಲಿ ಲಾಗಿನ್ ಕೂಡ ಆಗದೆ ಮನೆಯಲ್ಲೇ ಕುಳಿತಿದ್ದರು. ಆಯೋಗದ ಪ್ರಕಾರ ಮೊದಲ ಐದು ದಿನಗಳ ಕಾಲ 30 ಸಾವಿರದಷ್ಟು ಗಣತಿದಾರರು ಆಯಪ್ ಸಹ ಡೌನ್ಲೋಡ್ ಮಾಡಿರಲಿಲ್ಲ. ಅಂತಹವರ ವಿರುದ್ಧ ಮೇಲಧಿಕಾರಿಗಳು 'ಶಿಸ್ತು ಕ್ರಮ' ಎಚ್ಚರಿಕೆ ನೀಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದು, ಸಮೀಕ್ಷೆಯಲ್ಲಿ ತೊಡಗಿದ್ದಾರೆ. ಸಮೀಕ್ಷೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಶೇ.30 ರಷ್ಟು ಗಣತಿ ಪೂರ್ಣಗೊಂಡಿದ್ದು, ಉಡುಪಿಯಲ್ಲಿ ಕೇವಲ 7.55 ಹಾಗೂ ದಕ್ಷಿಣ ಕನ್ನಡದಲ್ಲಿ ಶೇ.7.63 ರಷ್ಟು ಸಮೀಕ್ಷೆ ಮಾತ್ರ ಆಗಿದೆ. ಈ ಭಾಗದಲ್ಲಿ ಸಮೀಕ್ಷೆಗೆ ವಿಶೇಷ ಒತ್ತು ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.