ಬೆಂಗಳೂರು: ರಾಜ್ಯದ ವಾಹನ ಸವಾರರಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಮಹತ್ವದ ರಿಯಾಯಿತಿ ಘೋಷಿಸಿದೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಬಾಕಿಯಾಗಿರುವ ದಂಡ ಮೊತ್ತದ ಮೇಲೆ 50% ರಿಯಾಯಿತಿ ನೀಡಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ತೀರ್ಮಾನದಿಂದ ಲಕ್ಷಾಂತರ ವಾಹನಚಾಲಕರಿಗೆ ಖುಷಿಯ ಸುದ್ದಿ ಸಿಕ್ಕಿದಂತಾಗಿದೆ. ಸರ್ಕಾರದ ಆದೇಶದಂತೆ ನಾಳೆಯಿಂದಲೇ ಅಂದರೆ ಸೆಪ್ಟೆಂಬರ್ 21ದಿಂದಲೇ ರಾಜ್ಯದಾದ್ಯಂತ 50% ದಂಡ ರಿಯಾಯಿತಿ ಯೋಜನೆ ಜಾರಿಗೆ ಬರಲಿದೆ. ಈ ವಿಶೇಷ ಅವಕಾಶ ಡಿಸೆಂಬರ್ 12 ರವರೆಗೆ ಮಾತ್ರ ಲಭ್ಯವಿರಲಿದೆ. ಚಾಲಕರು ಈ ಅವಧಿಯೊಳಗೆ ತಮ್ಮ ಬಾಕಿ ಇರುವ ಸಂಚಾರ ದಂಡಗಳನ್ನು 50% ರಿಯಾಯಿತಿಯಲ್ಲಿ ಪಾವತಿಸಬಹುದು. ಸಂಚಾರ ದಂಡ ರಿಯಾಯಿತಿ ಕುರಿತಂತೆ ಸಾರಿಗೆ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿದ ಬಳಿಕ, ಸರ್ಕಾರವು ಅದನ್ನು ಅಂಗೀಕರಿಸಿ ತಕ್ಷಣ ಜಾರಿಗೆ ತರಲು ಆದೇಶ ಹೊರಡಿಸಿದೆ. ಕಳೆದ ಬಾರಿ ದಂಡ ರಿಯಾಯಿತಿ ನೀಡಿದಾಗ ಸರ್ಕಾರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದ ಕಾರಣ, ಮತ್ತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಒಬ್ಬ ಚಾಲಕರಿಗೆ ₹2,000 ದಂಡ ಬಾಕಿ ಇದೆ ಎಂದರೆ ಅವರಿಗೆ 50% ರಿಯಾಯಿತಿ ಅನ್ವಯಿಸಿ ಕೇವಲ ₹1,000 ಪಾವತಿಸಿದರೆ ಕೇಸ್ ಕ್ಲಿಯರ್ ಆಗುತ್ತದೆ. ಕಳೆದ ಕೆಲವು ತಿಂಗಳಲ್ಲಿ ಟ್ರಾಫಿಕ್ ಇ-ಚಲಾನ್ಗಳ ಬಾಕಿ ಪ್ರಕರಣಗಳು ಹೆಚ್ಚಾಗಿದ್ದವು. ದಂಡದ ಮೊತ್ತ ಹೆಚ್ಚಿರುವುದರಿಂದ ನಾಗರಿಕರು ಪಾವತಿಸಲು ಹಿಂಜರಿದಿದ್ದರು. ಈಗಿನ ರಿಯಾಯಿತಿ ಘೋಷಣೆ ಸಾಮಾನ್ಯ ಚಾಲಕರಿಗೆ ದೊಡ್ಡ ಸೌಲಭ್ಯ ನೀಡಲಿದೆ.