ಶಿವಮೊಗ್ಗ: 'ಮಳೆ ಮಾಪನ ಕೇಂದ್ರಗಳು ಹಾಳಾದರೆ ಮಾತ್ರ ವಿಮಾ ಕಂಪೆನಿಗೆ ಲಾಭ ಎಂಬ ಅಧಿಕಾರಿಗಳ ಧೋರಣೆ ಜಿಲ್ಲೆಯಲ್ಲಿ ಪ್ರಧಾನಿ ಮೋದಿ ಅವರ ಕನಸಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅನುಷ್ಠಾನಕ್ಕೆ ಕೊಳ್ಳಿ ಇಟ್ಟಿದೆ' ಎಂದು ಸಂಸದ ಬಿ.ವೈ.ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಡಳಿತ ಹಾಗೂ ಮಲೆನಾಡಿನ ವಿವಿಧ ಭಾಗಗಳಿಂದ ಬಂದಿದ್ದ ರೈತ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದರು. ಬೆಳೆ ವಿಮೆ ನಿಗದಿಯಲ್ಲಿ ಆಗಿರುವ ಲೋಪವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಲಿ, ಶಿವಮೊಗ್ಗವನ್ನೇ ಮಾದರಿ ಆಗಿಟ್ಟುಕೊಂಡು ಇಡೀ ರಾಜ್ಯದ ರೈತರಿಗೆ ನ್ಯಾಯ ಸಿಗುವಂತೆ ಮಾಡೋಣ ಎಂದು ಹೇಳಿದರು. 'ಜಿಲ್ಲೆಯಲ್ಲಿ ಮಳೆ ಮಾಪನ ಕೇಂದ್ರಗಳು ಹಾಳಾಗಿ ಮೂರರಿಂದ ನಾಲ್ಕು ವರ್ಷಗಳು ಆಗಿವೆ' ಎಂಬ ಮಾಹಿತಿಯನ್ನು ಅಧಿಕಾರಿಗಳು ಸಭೆಗೆ ನೀಡಿದರು. ಅದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಸಂಸದರು, 'ಮಳೆ ಮಾಪನ ಕೇಂದ್ರಗಳು ಕೆಲಸ ಮಾಡಿದ್ದರೆ ಇವರಿಗೆ (ವಿಮಾ ಕಂಪೆನಿ) ಆಟ ಆಡಲು ಅವಕಾಶ ಇರಲಿಲ್ಲ. ಹಾಳಾದರೆ ಮಾತ್ರ ರೈತರಿಗೆ ಬೇಕಾದಂತೆ ವಿಮಾ ಮೊತ್ತ ಕೊಡಬಹುದು. ಹೀಗಾಗಿಯೇ ಮಳೆ ಮಾಪನ ಯಂತ್ರಗಳ ದುರಸ್ತಿಗೆ ಮುಂದಾಗದೇ ಇಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ' ಎಂದು ತರಾಟೆಗೆ ತೆಗೆದುಕೊಂಡರು. ಜಿಲ್ಲೆಯಲ್ಲಿರುವ 280 ಮಳೆ ಮಾಪನ ಯಂತ್ರಗಳಲ್ಲಿ ಶೇ 75ರಷ್ಟು ಯಂತ್ರಗಳು ಕಾರ್ಯನಿರ್ವಹಿಸುತ್ತಿಲ್ಲ. ಹೀಗಿರುವಾಗ ವಿಮಾ ಕಂಪೆನಿಯವರು ಮಳೆಮಾಪನದ ದತ್ತಾಂಶ ಎಲ್ಲಿಂದ ಸಂಗ್ರಹಿಸಿದ್ದಾರೆ?. ಪಕ್ಕದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿದ್ದ ಮಳೆಯ ಮಾಹಿತಿ ಆಧರಿಸಿ, ಮಳೆಯ ಪ್ರಮಾಣವನ್ನು ನಿರ್ಧರಿಸುವುದು ಸರಿಯಾದ ಕ್ರಮವಲ್ಲ. ಒಂದೊಮ್ಮೆ ನೆರೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿದ್ದ ಮಳೆ ಪ್ರಮಾಣವನ್ನು ಗುರುತಿಸುವುದಾದರೆ ಅದಕ್ಕೆ ರಸ್ತೆಯ ಇಲ್ಲವೇ ವೈಮಾನಿಕ ದೂರವನ್ನು ಆಧರಿಸಲಾಗುತ್ತದೆಯೇ ಎಂದು ಪ್ರಶ್ನಿಸಿದ್ದು, ಅಧಿಕಾರಿಗಳು ನಿಖರ ಉತ್ತರ ಕೊಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಮೊದಲು ಹೋಬಳಿ ಮಟ್ಟದಲ್ಲಿ ಮಳೆಯ ಪ್ರಮಾಣ ಗುರುತಿಸಲಾಗುತ್ತಿತ್ತು. ಈಗ ಪ್ರತಿ ಗ್ರಾಮ ಪಂಚಾಯಿತಿಯನ್ನು ಒಂದು ಯುನಿಟ್ ಆಗಿ ಗುರುತಿಸಿ, ಮಳೆಮಾಪನ ಮಾಡಲಾಗುತ್ತಿದೆ. ಹೊಸನಗರ, ತೀರ್ಥಹಳ್ಳಿ ಮತ್ತು ಸಾಗರ ತಾಲ್ಲೂಕುಗಳಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆ ಬಂದಿದೆ. ವಿಮೆ ಪರಿಹಾರಕ್ಕೆ ಈ ಹಿಂದಿನ ಸಾಲಿನಲ್ಲಿ ಕೊಡಲಾಗಿದ್ದ ಮೊತ್ತಕ್ಕಿಂತ ಕಡಿಮೆ ಮೊತ್ತವನ್ನು ಅಂದಾಜಿಸಲಾಗಿದೆ. ಅಲ್ಲದೆ ಅದು ರೈತರು ಈಗಾಗಲೇ ಪಾವತಿಸಿರುವ ವಿಮಾ ಮೊತ್ತದ ಪ್ರಮಾಣಕ್ಕಿಂತ ಕಡಿಮೆ ಆಗಿರುವುದು ಸೋಜಿಗ ಎಂದರು. ಮಳೆ ಪ್ರಮಾಣದ ನೈಜ ದತ್ತಾಂಶಗಳನ್ನು ವಾರದೊಳಗೆ ಸಂಗ್ರಹಿಸಿ ರೈತರಿಗೆ ನ್ಯಾಯಯುತ ವಿಮಾ ಮೊತ್ತ ಪಾವತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯಿತಿ ಸಿಇಒ ಎನ್. ಹೇಮಂತ್, ಮಾಜಿ ಶಾಸಕ ಕೆ.ಬಿ. ಅಶೋಕ ನಾಯ್ಕ, ಕೆ.ಎಸ್. ಗುರುಮೂರ್ತಿ, ತೋಟಗಾರಿಕೆ ಇಲಾಖೆ ಜಂಟಿನಿರ್ದೇಶಕ ಎ.ಬಿ. ಸಂಜಯ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣ್ಕುಮಾರ್, ವಿಮಾ ಕಂಪನಿಯ ಮುಖ್ಯಸ್ಥ ಅಜಿತ್ ಉಪಸ್ಥಿತರಿದ್ದರು.
ಕೇಂದ್ರ ಕೃಷಿ ಸಚಿವರಿಗೆ ಮನವಿ ಕರ್ನಾಟಕದಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಮೊತ್ತ ವಿತರಣೆಯಲ್ಲಿ ರೈತರಿಗೆ ಆಗಿರುವ ತೊಂದರೆ ಹಿನ್ನೆಲೆಯಲ್ಲಿ ಯೋಜನೆಯ ಪುನರ್ವಿಮರ್ಶಿಸಿ ನ್ಯಾಯ ಕಲ್ಪಿಸುವಂತೆ ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಸಂಸದ ಬಿ.ವೈ.ರಾಘವೇಂದ್ರ ದೆಹಲಿಯಲ್ಲಿ ಮನವಿ ಸಲ್ಲಿಸಿದ್ದಾರೆ. ವಿಮೆಗೆ ಟರ್ಮ್ ಶೀಟ್ ನಿಗದಿ ನಿಖರ ದತ್ತಾಂಶಗಳ ಸಂಗ್ರಹ ಮಳೆ ಮಾಪನ ಯಂತ್ರಗಳು ವಿಫಲವಾದರೆ ಪರ್ಯಾಯ (ಬ್ಯಾಕಪ್) ಸ್ಟೇಶನ್ಗಳ ನಿಗದಿ ಯೋಜನೆಯ ಪಾರದರ್ಶಕ ಹಾಗೂ ನಂಬಿಕೆಯ ನಿರ್ವಹಣೆ ರೈತರು ಮೇಲ್ಮನವಿ ಸಲ್ಲಿಸಲು ಅವಕಾಶ ನಿಗದಿಯಾದ ವಿಮಾ ಪರಿಹಾರ ಮೊತ್ತದ ತಕ್ಷಣದ ಪುನರಾವಲೋಕನ ಮೊತ್ತ ಹೆಚ್ಚಳಕ್ಕೆ ಅವಕಾಶ ಮಾಡಿಕೊಡಲು ಅನುಕೂಲವಾಗುವಂತೆ ಇಡೀ ಯೋಜನೆಯನ್ನು ಪರಾಮರ್ಶಿಸುವಂತೆ ಕೇಂದ್ರ ಸಚಿವರಿಗೆ ಮನವಿಯಲ್ಲಿ ಕೋರಿದ್ದಾರೆ.