ಈಶ್ವರಬಳ್ಳಿ ಎಂದು ಕರೆಯುವ ಈ ಗಿಡವನ್ನು ತೆಲುಗಿನಲ್ಲಿ ಈಶ್ವರಿಚೆಟ್ಟು, ಕಡುಲಾ ಹಿಂದಿಯಲ್ಲಿ ಈಶ್ವರ್ ಮೂಲ್, ವಿಷಮಂಗಾರಿ ಎಂಬೆಲ್ಲ ಹೆಸರುಗಳಿಂದ ಕರೆಯುತ್ತಾರೆ. ಈ ಗಿಡದ ಬೇರು, ಎಲೆ ವಿಶೇಷವಾದ ಪರಿಮಳವನ್ನು ಹೊಂದಿರುವುದರೊಂದಿಗೆ, ಇದೊಂದು ಅಧ್ಭುತವಾದ ಔಷಧೀಯ ಸಸ್ಯ ಮತ್ತು ಅಪರೂಪದ ಸಸ್ಯವೂ ಆಗಿದೆ. ಈ ಗಿಡವನ್ನು ಆಯುರ್ವೇದ, ಸಿದ್ಧ ವೈದ್ಯ ಮತ್ತು ಪಾರಂಪರ್ಯ ವೈದ್ಯದಲ್ಲಿ ಉಪಯೋಗಿಸುತ್ತಾ ಬಂದಿದ್ದಾರೆ. ಹಳ್ಳಿಗಳ ಮನೆ ಮದ್ದಿನಲ್ಲಂತೂ ಇದರ ಉಪಯೋಗ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಾವು ಚೇಳು ಇತ್ಯಾದಿ ವಿಷಜಂತುಗಳ ಕಚ್ಚಿದಾಗ, ಈಶ್ವರ ಬೇರನ್ನು ಗಂಧ ತೆಯಿಯುವ ಕಲ್ಲಿನ ಮೇಲೆ ತೇಯ್ದು ಗಂಧ ತೆಗೆದು ಕಡಿತದ ಜಾಗಕ್ಕೆ ಹಚ್ಚಬೇಕು. ಮುಖ್ಯವಾಗಿ ಒಂದು ಚಮಚ ಗಂಧವನ್ನು ನೀರಿನಲ್ಲಿ ಕಲಸಿ ಹೊಟ್ಟೆಗೆ ಕುಡಿಸಬೇಕು. ಈ ರೀತಿ ಒಂದು ದಿನಕ್ಕೆ ಮೂರು ಬಾರಿ 5-6 ದಿನ ಕುಡಿಸಿದರೆ ವಿಷನಿವಾರಣೆಯಾಗಿ ಪ್ರಾಣಾಪಾಯದಿಂದ ಪಾರಾಗುತ್ತಾರೆ ಎಂದು ಹಿರಿಯರು ಹೇಳಿದ್ದಾರೆ. ಈಶ್ವರ ಬೇರನ್ನು ಶುಭ್ರಗೊಳಿಸಿ ನೆರಳಲ್ಲಿ ಚೆನ್ನಾಗಿ ಒಣಗಿಸಿ ಪುಡಿಮಾಡಿ ದಿನವು ಒಂದು ಲೋಟ ನೀರಿಗೆ ಒಂದು ಸ್ಫೂನ್ ಚೂರ್ಣವನ್ನು ಬೆರಸಿ ಸೇವಿಸುತ್ತಿದ್ದರೆ ಅಧಿಕ ರಕ್ತದೊತ್ತಡ ತಹಬದಿಗೆ ಬರುವುದರೊಂದಿಗೆ ಹೃದ್ರೋಗ, ಕ್ಯಾನ್ಸರ್ ನಂತ ರೋಗಕ್ಕೂ ಔಷದಿಯಾಗಬಹುದು ಎನ್ನಲಾಗುತ್ತದೆ. ಒಂದು ಲೋಟ ನೀರಿನಲ್ಲಿ ಒಂದು ಸ್ಫೂನ್ ಈಶ್ವರಿ ಬೇರಿನ ಗಂಧ ಕಲಸಿ ಕುಡಿಯುತ್ತಿದ್ದರೆ ಕೀಲು ನೋವಿಗೂ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು ಆದರೆ ಗರ್ಭಿಣಿ ಸ್ತ್ರೀಯರು ಈಶ್ವರ ಬೇರನ್ನು ಬಳಸಬಾರದು. ಇಂತಹ ಔಷಧಗಳನ್ನು ಬಳಸುವ ಮೊದಲು ಪಂಡಿತರ ಸಲಹೆ ಪಡೆಯುವುದು ಉತ್ತಮ.