ಮಂಗಳೂರು : ಹಲವು ಮಂದಿಗೆ ಕೋಟ್ಯಂತರ ರೂ. ವಂಚಿಸಿ ಇದೀಗ ನಗರದ ಜೈಲಿನಲ್ಲಿರುವ ಬಜಾಲ್ ನಿವಾಸಿ ರೋಶನ್ ಸಲ್ದಾನನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಕಸ್ಟಡಿಗೆ ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಸೋಮವಾರ ಪೊಲೀಸ್ ಕಸ್ಟಡಿಗೊಳಗಾಗುವ ಸಾಧ್ಯತೆ ಇದೆ. 2018ರಲ್ಲಿ ರೋಶನ್ ಕನ್ನಡ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದ. ತನ್ನ ಪತ್ನಿಯ ಹೆಸರಿನಲ್ಲಿ ಡುಬಾಯ್ಸ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಮಕ್ಕಳ ಸಿನೆಮಾವನ್ನು ನಿರ್ಮಾಣ ಮಾಡಿದ್ದ. ಆದರೆ ಅದು ನಿರೀಕ್ಷಿಸಿದಷ್ಟು ಯಶಸ್ಸು ಪಡೆದಿರಲಿಲ್ಲ ಎಂದು ತಿಳಿದು ಬಂದಿದೆ.
ಆರೋಪಿಯ ವಿರುದ್ಧ 2 ವಂಚನೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಜಪ್ಪಿನಮೊಗರು ನಲ್ಲಿರುವ ಐಷಾರಾಮಿ ಮನೆಯಿಂದ ಬಂಧಿಸಿ ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿಯನ್ನು ಪೊಲೀಸರು ಬಂಧಿಸಿದ ಬಗ್ಗೆ ಮಾಹಿತಿ ಪಡೆದ ವಂಚನೆಗೊಳಗಾದ ಮೂವರು ಪೊಲೀಸರಿಗೆ ದೂರು ನೀಡಿದ್ದಾರೆ. ರೋಶನ್ ಯಾರಿಂದ ಎಷ್ಟು ಹಣ ಪಡೆದು ವಂಚಿಸಿದ್ದಾನೆ ಎಂಬುದರ ಬಗ್ಗೆ ಆತನ ಸಂಪೂರ್ಣ ವಿಚಾರಣೆಯ ಬಳಿಕ ಮಾಹಿತಿ ದೊರೆಯಲಿದೆ. ಸದ್ಯದ ಅಂದಾಜಿನ ಪ್ರಕಾರ ಕಳೆದ 15 ವರ್ಷಗಳಲ್ಲಿ ಸುಮಾರು 200 ಕೋ.ರೂ.ಗೂ ಅಧಿಕ ವಂಚನೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.