ಮಂಗಳೂರು: ಬೃಹತ್ ಗುಂಡಿಗಳಿಂದ ವಾಹನ ಸಂಚಾರಕ್ಕೆ ಅಯೋಗ್ಯವಾಗಿರುವ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಕಂಕನಾಡಿ ಬೆಂದೂರ್ವೆಲ್ ವರೆಗಿನ ಮುಖ್ಯ ರಸ್ತೆ ದುರಸ್ಥಿಗೆ ಒತ್ತಾಯಿಸಿ ಡಿವೈಎಫ್ಐ ಮಂಗಳೂರು ನಗರ ಸಮಿತಿ ನೇತೃತ್ವದಲ್ಲಿ ಸೋಮವಾರ ಕಂಕನಾಡಿ ಕರಾವಳಿ ವೃತ್ತದ ಬಳಿ ಭಿತ್ತಿಪತ್ರ ಪ್ರದರ್ಶನ ನಡೆಯಿತು. ರಸ್ತೆ ದುರಸ್ಥಿ ಮಾಡದಿರುವುದಕ್ಕೆ ತೀವ್ರ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಯ್ತಿಯಾಝ್ ಅವರು ಸ್ಮಾರ್ಟ್ ಸಿಟಿ ಯೋಜನೆ ಹೆಸರಿನಲ್ಲಿ ಬಂದಿರುವ ಸಾವಿರಾರು ಕೋಟಿ ಹಣ ವ್ಯರ್ಥವಾಗಿದೆ ನಗರ ಪ್ರವೇಶ ಮಾಡುವ ಮುಖ್ಯ ರಸ್ತೆಯನ್ನೇ ನಿರ್ಲಕ್ಷ್ಯ ಮಾಡಲಾಗಿದೆ. ದಿನನಿತ್ಯ ರಸ್ತೆ ಗುಂಡಿಗಳಿಗೆ ಬಿದ್ದು ಸಾವು ನೋವುಗಳು ಸಂಭವಿಸುತ್ತಿದೆ ರಸ್ತೆ ಗುಂಡಿಗಳಿಂದಾಗಿ ಅಪಘಾತ ಸಂಭವಿಸಿದರೆ ಪಾಲಿಕೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜನಪ್ರತಿನಿದಿಗಳು ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು. ಡಿವೈಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಮಾಧುರಿ ಬೋಳಾರ ಅವರು ಮಾತನಾಡಿ ರಸ್ತೆ ಗುಂಡಿಗ ಳಿಂದಾಗಿ ನಗರದಲ್ಲಿ ದಿನನಿತ್ಯ ಟ್ರಾಫಿಕ್ ಜಾಮ್ ಆಗುತ್ತಿದೆ ನಗರದಿಂದ ಹೆದ್ದಾರಿ ತಲುಪ ಬೇಕಾದರೆ ಒಂದು ಗಂಟೆ ವಿಳಂಬ ಆಗುತ್ತಿದೆ ಇದರಿಂದ ನಗರಕ್ಕೆ ಕೆಲಸಕ್ಕೆ ಬರುವ ಯುವತಿಯರು ಮತ್ತು ಮಹಿಳೆ ಯರು ಮನೆಗೆ ತಲುಪಬೇಕಾದರೆ ರಾತ್ರಿಯಾಗುತ್ತಿದೆ. ಗಂಟೆಗಟ್ಟಲೆ ಟ್ರಾಫಿಕ್ ಜಾಮ್ನಲ್ಲಿ ವ್ಯರ್ಥ ಆಗುವ ಸಮಯಕ್ಕೆ ಹೊಣೆ ಯಾರು ಎಂದು ಅವರು ಪ್ರಶ್ನಿಸಿದರು.
ಸಿಪಿಎಂ ನಗರ ದಕ್ಷಿಣ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು,ಡಿವೈಎಫ್ಐ ನಗರಾಧ್ಯಕ್ಷ ಜಗದೀಶ್ ನಾರಾಯಣ್ ಬಜಾಲ್, ಜಿಲ್ಲಾ ಮುಖಂಡರಾದ ತಯ್ಯುಬ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಡಿವೈಎಫ್ಐ ಮುಖಂಡರಾದ ರಿಝಾನ್ ಖಂಡಿಗ,ಪುನೀತ್ ಊರ್ವಸ್ಟೋರ್, ವರ ಪ್ರಸಾದ್ ಬಜಾಲ್, ಕೃಷ್ಣ ಬಜಾಲ್, ಪ್ರವೀಣ್ ಕೊಂಚಾಡಿ, ಆನಂದ ಏನೇಲ್ಕಾರ್,ಕಟ್ಟಡ ಕಾರ್ಮಿಕರ ಸಂಘಟನೆ ಮುಖಂಡ ರಾದ ಮನೋಜ್ ಕುಲಾಲ್, ಲೋಕೇಶ್ ಎಂ, ರಿಕ್ಷಾ ಚಾಲಕರ ಸಂಘದ ಮುಖಂಡರಾದ ಅನ್ಸರ್ ಬಜಾಲ್, ಇಕ್ಬಾಲ್ ಉರ್ವಸ್ಟೋರ್, ಜನವಾದಿ ಮಹಿಳಾ ಸಂಘದ ಮುಖಂಡರಾದ ಅಸುಂತ ಡಿಸೋಜ, ಯೋಗೀತಾ ಸುವರ್ಣ ಮುಂತಾದವರು ಉಪಸ್ಥಿತರಿದ್ದರು.
ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚಿ ರಸ್ತೆ ದುರಸ್ಥಿ ಮಾಡದಿರುವುದನ್ನು ವಿರೋಧಿಸಿ ಸರಣಿ ಪ್ರತಿಭಟನೆ ನಡೆಸಲು ಡಿವೈಎಫ್ಐ ನಿರ್ಧಾರ ಕೈಗೊಂಡಿದೆ ಎಂದು ಬಿಕೆ ಇಮ್ಮಿಯಾಜ್ ತಿಳಿಸಿದ್ದಾರೆ. ಜಿಲ್ಲೆಯ ಹಲವೆಡೆ ರಸ್ತೆ ಗುಂಡಿಗೆ ಬಿದ್ದು ದಿನನಿತ್ಯ ಯುವಜನರು ಸಾವಿಗೀಡಾಗುತ್ತಿದ್ದಾರೆ, ರಾಷ್ಟ್ರೀಯ ಹೆದ್ದಾರಿ ಸಹಿತ ಒಳ ರಸ್ತೆಗಳು ಹದಗೆಟ್ಟು ಸಂಚಾರಕ್ಕೆ ಅಯೋಗ್ಯವಾದ ಸ್ಥಿತಿಯಲ್ಲಿದ್ದು ಕೂಡಲೇ ದುರಸ್ಥಿಗೆ ಒತ್ತಾಯಿಸಿ ಜಿಲ್ಲೆಯಲ್ಲಿ ಸರಣಿ ಹೋರಾಟ ಸಂಘಟಿಸಲು ಡಿ ವೈಎಫ್ಐ ನಿರ್ಧರಿಸಿದೆ ಎಂದು ಬಿ.ಕೆ ಇಯ್ತಿಯಾಝ್ ತಿಳಿಸಿದರು.