image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬುರುಡೆ ದೂರುದಾರ ತೋರಿಸಿದ ಸ್ಥಳಗಳ ಉತ್ಖನನ ಆರಂಭ : ಮಧ್ಯಾಹ್ನದವರೆಗೂ ಸಿಗದ ಸಾಕ್ಷಿ

ಬುರುಡೆ ದೂರುದಾರ ತೋರಿಸಿದ ಸ್ಥಳಗಳ ಉತ್ಖನನ ಆರಂಭ : ಮಧ್ಯಾಹ್ನದವರೆಗೂ ಸಿಗದ ಸಾಕ್ಷಿ

ಮಂಗಳೂರು: ಧರ್ಮಸ್ಥಳ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಹೂತು ಹಾಕಲಾಗಿದೆ ಎನ್ನಲಾದ ಮೃತದೇಹಗಳನ್ನು ಹೊರ ತೆಗೆಯವ ಕಾರ್ಯ ಇಂದು ಬಿಗು ಪೊಲೀಸ್ ಭದ್ರತೆಯೊಂದಿಗೆ ಆರಂಭವಾಯಿತು. ಧರ್ಮಸ್ಥಳದ ಸ್ನಾನ ಘಟ್ಟದ ಸಮೀಪದ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ಶವಗಳನ್ನು ಹೂತಿಡಲಾಗಿದೆ ಎನ್ನಲಾದ ಜಾಗವನ್ನು ಏಳೆಂಟು ಕಾರ್ಮಿಕರು ಜೋರು ಮಳೆಯ ನಡುವೆಯೇ ಅಗೆಯುತ್ತಿದ್ದು, ಈ ಪ್ರಕರಣದ  ಸಾಕ್ಷಿ ದೂರುದಾರ ವ್ಯಕ್ತಿಯೂ ಮುಸುಕು ಧರಿಸಿ ಸ್ಥಳದಲ್ಲಿ ಹಾಜರಿದ್ದರು. ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹಾಗೂ ಬೆಳ್ತಂಗಡಿ ತಾಲ್ಲೂಕಿನ ತಹಶೀಲ್ದಾ‌ರ್ ಪೃಥ್ವಿ ಸಾನಿಕಂ, ಎಸ್‌ಐಟಿಯ ಅಧಿಕಾರಿಯಾಗಿರುವ ಆಂತರಿಕ ಭದ್ರತಾ ವಿಭಾಗದ ಎಸ್.ಪಿ ಜಿತೇಂದ್ರ ಕುಮಾರ್ ದಯಾಮ ಹಾಗೂ ಇತರ ಅಧಿಕಾರಿಗಳು ಸ್ಥಳದಲ್ಲಿದ್ದು ಮಾರ್ಗದರ್ಶನ ಮಡುತ್ತಿದ್ದಾರೆ. ವಿಧಿವಿಜ್ಞಾನ ತಂಡದ ಅಧಿಕಾರಿಗಳೂ ಶವಗಳನ್ನು ಹೂತಿಡಲಾಗಿದೆ ಎನ್ನಲಾದ ಜಾಗಕ್ಕೆ ತೆರಳಿದ್ದಾರೆ. ಸಾಕ್ಷಿ ದೂರುದಾರನ ಜೊತೆಗೆ ವಕೀಲರ ತಂಡವೂ ಸ್ಥಳಕ್ಕೆ ಬಂದಿದೆ.

ಜಾಗವನ್ನು ಅಗೆಯುವ ಕಾರ್ಯ ಆರಂಭಿಸುವ ಮುನ್ನ ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಲ್ಲಿ ಡಿಐಜಿ ಎಂ.ಎನ್.ಅನುಚೇತ್ ನೇತೃತ್ವದಲ್ಲಿ ಸಭೆ ನಡೆಸಿದ ಅಧಿಕಾರಿಗಳು ಮುಂದಿನ ತನಿಖೆ ಬಗ್ಗೆ ಸಮಾಲೋಚನೆ ನಡೆಸಿದರು. ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪದಲ್ಲಿ 13 ಜಾಗಗಳನ್ನು ಸಾಕ್ಷಿ ದೂರುದಾರ ಎಸ್‌ಐಟಿ ಅಧಿಕಾರಿಗಳಿಗೆ ಸೋಮವಾರ ತೋರಿಸಿದ್ದರು. ಆ ಜಾಗಗಳ ಜಿಪಿಎಸ್ ಗುರುತುಗಳನ್ನು ದಾಖಲಿಸಿಕೊಂಡ ಎಸ್‌ಐಟಿ ಅಧಿಕಾರಿಗಳು ಅಲ್ಲಿ ಕೆಂಪು ರಿಬ್ಬನ್ ಕಟ್ಟಿ, ಪ್ರತಿ ಜಾಗವನ್ನೂ ನಿರ್ದಿಷ್ಟ ಸಂಖ್ಯೆಯ ಮೂಲಕ ಗುರುತು ಮಾಡಿದ್ದರು. ಜಾಗಗಳನ್ನು ಅಗೆಯುವ ದೃಶ್ಯವನ್ನು ಎಸ್‌ಐಟಿಯ ಸಿಬ್ಬಂದಿ ವಿಡಿಯೊ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದಾರೆ. ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಜಾಗಗಳ ಬಳಿ ಸಶಸ್ತ್ರ ಪೊಲೀಸ್ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ. ಗರುಡ ಪಡೆ ಹಾಗೂ ವಿಶೇಷ ಕಾರ್ಯಪಡೆಯ ತರಬೇತಾದ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ತನಿಖಾ ಕಾರ್ಯಕ್ಕೆ ಭದ್ರತೆ ಒದಗಿಸಿದ್ದಾರೆ. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಒಂದು ತುಕಡಿ ಭದ್ರತೆಗಾಗಿ ಸ್ಥಳದಲ್ಲಿ ಬೀಡುಬಿಟ್ಟಿದೆ. ಮಧ್ಯಾಹ್ನದ ವರೆಗೂ ಯಾವುದೇ ಸಾಕ್ಷಿ ದೊರಕದ ಹಿನ್ನಲೆ ಮಧ್ಯಾಹ್ನ ಊಟದ ನಂತರ ಮತ್ತೆ ಉತ್ಖನನ ನಡೆಯಲಿದೆ ಎಂದು ತಿಳಿದು ಬಂದಿದೆ.

Category
ಕರಾವಳಿ ತರಂಗಿಣಿ