ಮಂಗಳೂರು: ಕರ್ನಾಟಕದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ 113 ವರ್ಷಗಳ ಇತಿಹಾಸವಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಎಮ್.ಸಿ.ಸಿ ಬ್ಯಾಂಕ್ ಲಿಮಿಟೆಡ್ 31 ಮಾರ್ಚ್ 2025 ರಂದು ಮುಕ್ತಾಯಗೊಂಡ ವಿತ್ತೀಯ ವರ್ಷದಲ್ಲಿ ಎಲ್ಲಾ ವ್ಯವಹಾರ ಮಾಪನಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಅನಿಲ್ ಲೋಬೋ ಹೇಳಿದರು. ಬ್ಯಾಂಕಿನ ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕೇವಲ ಕರ್ನಾಟಕದ ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿದ್ದ ಬ್ಯಾಂಕಿನ ಕಾರ್ಯವ್ಯಾಪ್ತಿಯು ಪ್ರಸ್ತುತ ಆಡಳಿತ ಮಂಡಳಿ ವಹಿಸಿಕೊಂಡ ನಂತರ ಇಡೀ ಕರ್ನಾಟಕ ರಾಜ್ಯದ್ಯಂತ ವಿಸ್ತರಿಸಿದೆ. ಎಮ್.ಸಿ.ಸಿ. ಬ್ಯಾಂಕ್ ಸಂಪೂರ್ಣವಾಗಿ ಕೋರ್ ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇತರ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಲಭ್ಯವಿರುವ ಎಲ್ಲಾ ಸೇವೆ ಮತ್ತು ಸೌಲಭ್ಯಗಳು ಎಮ್.ಸಿ.ಸಿ. ಬ್ಯಾಂಕಿನಲ್ಲಿ ದೊರೆಯುತ್ತಿವೆ. ಬ್ಯಾಂಕ್ ಕರ್ನಾಟಕ ರಾಜ್ಯದಾದ್ಯಂತ ತನ್ನ ಶಾಖೆಗಳನ್ನು ವಿಸ್ತರಿಸುವ ಕಾರ್ಯಯೋಜನೆಯನ್ನು ಹಮ್ಮಿಕೊಂಡಿದೆ.
ಕರ್ನಾಟಕ ರಾಜ್ಯದ್ಯಾಂತ ಕಾರ್ಯವ್ಯಾಪ್ತಿ ಹೊಂದಿರುವ ಎಮ್.ಸಿ.ಸಿ. ಬ್ಯಾಂಕ್, ಮಂಗಳೂರಿನಲ್ಲಿ ನವೀಕೃತಗೊಂಡ ಸುಸಜ್ಜಿತ ಆಡಳಿತ ಕಛೇರಿಯೊಂದಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 19 ಶಾಖೆಗಳನ್ನು ಹೊಂದಿದೆ. ಪ್ರಶಕ್ತ ಆಡಳಿತ ಮಂಡಳಿಯು 2018ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, 2018ರಿಂದ 2025ರ ವಿತ್ತೀಯ ವರ್ಷದಲ್ಲಿ ಅಭೂತಪೂರ್ವ ಪ್ರಗತಿಯನ್ನು ದಾಖಲಿಸಿದೆ. 2017ರಲ್ಲಿ ರೂ. 304 ಕೋಟಿ ಇದ್ದ ಬ್ಯಾಂಕಿನ ಠೇವಣಿಯು 2025ರಲ್ಲಿ ರೂ. 728 ಕೋಟಿಗೆ ತಲುಪಿದ್ದು, ಶೇಕಡಾ 139ರಷ್ಟು ಪ್ರಗತಿಯನ್ನು ದಾಖಲಿಸಿದೆ. ರೂ. 191 ಕೋಟಿ ಇದ್ದ ಸಾಲ ಮತ್ತು ಮುಂಗಡಗಳು ರೂ. 572 ಕೋಟಿಗೆ ತಲುಪಿದ್ದು, ಶೇಕಡಾ 199ರಷ್ಟು ಪ್ರಗತಿಯನ್ನು ದಾಖಲಿಸಿದೆ. ರೂ. 13 ಕೋಟಿ ಇದ್ದ ಪಾಲು ಬಂಡವಾಳ ರೂ. 33 ಕೋಟಿಗೆ ತಲುಪಿದ್ದು, ಶೇಕಡಾ 154ರಷ್ಟು ಪ್ರಗತಿಯನ್ನು ದಾಖಲಿಸಿದೆ. ಬ್ಯಾಂಕಿನ ರಿಸರ್ವ್ ರೂ. 29 ಕೋಟಿಯಿಂದ ರೂ. 79 ಕೋಟಿಗೆ ತಲುಪಿದ್ದು, ಶೇಕಡಾ 172ರಷ್ಟು ಪ್ರಗತಿಯನ್ನು ದಾಖಲಿಸಿದೆ. ರೂ. 496 ಕೋಟಿ ಇದ್ದ ವ್ಯವಹಾರ ರೂ. 1300 ಕೋಟಿಗೆ ತಲುಪಿದ್ದು, ಶೇಕಡಾ 162ರಷ್ಟು ಪ್ರಗತಿಯನ್ನು ದಾಖಲಿಸಿದೆ. ಶೇಕಡಾ 11.70 ಇದ್ದ ಬ್ಯಾಂಕಿನ ಅಖಂಖ CRAR (Capital to Risk Assets Ratio) ಪ್ರಮಾಣವು ಶೇಕಡಾ 19.82 ತಲುಪಿದ್ದು ಶೇಕಡಾ 62 ರಷ್ಟು ಪ್ರಗತಿಯನ್ನು ದಾಖಲಿಸಿದೆ. ಶೇಕಡಾ 0.56 ಇದ್ದ ಬ್ಯಾಂಕಿನ ರಿಟರ್ನ್ ಅನ್ ಅಸೆಟ್ಸ್ ಮೌಲ್ಯವು ಶೇಕಡಾ 1.40 ಗೆ ತಲುಪಿ ಶೇಕಡಾ 150 ಪ್ರಗತಿಯನ್ನು ದಾಖಲಿಸಿದೆ.
ಬ್ಯಾಂಕಿನ ಪ್ರಗತಿಯ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿರುವ ಸಮರ್ಥ ಆಡಳಿತ ಮಂಡಳಿ, ಅದಕ್ಕನುಗುಣವಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದ ಶ್ರಮ ಹಾಗೂ ಬ್ಯಾಂಕಿನ ಆರ್ಥಿಕ ಪ್ರಗತಿಯತ್ತ ಗಮನಹರಿಸಿ ಕಾರ್ಯಯೋಜನೆಯನ್ನು ಹಮ್ಮಿಕೊಂಡಿರುವ ಕಾರಣ ಭಾರತೀಯ ರಿಸರ್ವ್ ಬ್ಯಾಂಕಿನ ಎಲ್ಲಾ ಮಾನದಂಡಗಳನ್ನು ಪೂರೈಸಿ ಎಮ್.ಸಿ.ಸಿ. ಬ್ಯಾಂಕ್ 22 ವರ್ಷಗಳ ನಂತರ ಬ್ರಹ್ಮಾವರ, ಬೆಳ್ತಂಗಡಿ ಮತ್ತು ಬೆಳ್ಮಣ್ನಲ್ಲಿ ಮೂರು ಶಾಖೆಗಳನ್ನು ತೆರೆದಿದ್ದು, ಶಾಖೆಗಳ ಒಟ್ಟು ಸಂಖ್ಯೆಯು 16ರಿಂದ 19ಕ್ಕೆ ತಲುಪಿದ್ದು, ಬೈಂದೂರಿನಲ್ಲಿ ತನ್ನ 20ನೇ ಶಾಖೆಯನ್ನು ದಿನಾಂಕ 03.08.2025ರಂದು ಉದ್ಘಾಟಿಸಲಿದ್ದೇವೆ ಎಂದರು. ಅಕ್ಟೋಬರ್ 5, 2025 ರಂದು 21ನೇ ಶಾಖೆಯನ್ನು ಸಂತೆಕಟ್ಟೆಯಲ್ಲಿ ತೆರೆಯಲಿದೆ ಎಂದು ತಿಳಿಸಿದರು.
ಬೈಂದೂರು ಶಾಖೆಯ ಉದ್ಘಾಟಣಾ ಕಾರ್ಯಕ್ರಮದಲ್ಲಿ ಎಮ್.ಸಿ.ಸಿ. ಬ್ಯಾಂಕ್ನ ಅಧ್ಯಕ್ಷ, ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಅವರು ಅಧ್ಯಕ್ಷತೆ ವಹಿಸುವರು. ಬೈಂದೂರಿನ ಹೋಲಿ ಕ್ರಾಸ್ ಚರ್ಚ್ನ ಧರ್ಮಗುರುಗಳಾದ ವಂದನೀಯ ವಿನ್ಸೆಂಟ್ ಕುವೆಲ್ಹೊ ಶಾಖೆಯನ್ನು ಆಶೀರ್ವದಿಸಲಿದ್ದಾರೆ. ಬೈಂದೂರಿನ ಶಾಸಕ ಶ್ರೀ ಗುರುರಾಜ್ ಗಂಟಿಹೊಳೆ ಅವರು ಮುಖ್ಯ ಅತಿಥಿಯಾಗಿರಲಿದ್ದಾರೆ. ಶ್ರೀ ಮೂಕಾಂಬಿಕಾ ದೇವಸ್ಥಾನ, ಕೊಲ್ಲೂರಿನ ಆಡಳಿತ ಧರ್ಮದರ್ಶಿ ಶ್ರೀ ಬಾಬು ಶೆಟ್ಟಿ, ಬೈಂದೂರು ಸೇಂಟ್ ಥಾಮಸ್ ರೆಸಿಡೆನ್ಶಿಯಲ್ ಸ್ಕೂಲ್, ಇದರ ಪ್ರಾಂಶುಪಾಲ ವಂದನೀಯ ಫಿಲಿಪ್ ನೆಲಿವಿಲ್ಲ, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀ ರಾಜು ಪೂಜಾರಿ, ಬೈಂದೂರು ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯ ಶ್ರೀ ಸದಾಶಿವ ಡಿ. ಪಡುವರಿ, ಶಿರೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀ ಕಾಪ್ಸಿ ನೂರ್ ಮೊಹಮ್ಮದ್, ನಾಡದೋಣಿ ರಾಜ್ಯ ಸಂಘದ ಅಧ್ಯಕ್ಷ ಶ್ರೀ ನಾಗೇಶ್ ಖಾರ್ವಿ, ಬೈಂದೂರಿನ ವಕೀಲರ ಸಂಘದ ಅಧ್ಯಕ್ಷ ಶ್ರೀ ಮೋಬಿ ಪಿ.ಸಿ. ಇವರು ಗೌರವ ಅತಿಥಿಗಳಾಗಲಿದ್ದಾರೆ ಎಂದರು.