ಮಂಗಳೂರು: ನಗರದಲ್ಲಿ ಅಕ್ಟೋಬರ್ 28ರಿಂದ ನವೆಂಬರ್ 2ರವರೆಗೆ 'ಮಂಗಳೂರು ಇಂಡಿಯಾ ಇಂಟರ್ನ್ಯಾಷನಲ್ ಚಾಲೆಂಜ್ 2025' ಬ್ಯಾಡ್ಮಿಂಟನ್ ಟೂರ್ನಿ ನಡೆಯಲಿದೆ' ಎಂದು ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಕಾರ್ಯದರ್ಶಿ ರಾಜೇಶ್ ತಿಳಿಸಿದರು. ಅವರು ನಗರದ ಖಾಸಗಿ ಹೊಟೇಲಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, 'ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ಟೂರ್ನಿ ಆಯೋಜನೆಯಾಗುತ್ತಿದೆ. ಭಾರತವೂ ಸೇರಿದಂತೆ ಸುಮಾರು ಎಂಟು ದೇಶಗಳಿಂದ 320ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಸಿಂಗಲ್ಸ್, ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಪಂದ್ಯಗಳಲ್ಲಿ ಸುಮಾರು 150ರಷ್ಟು ಪುರುಷ ಹಾಗೂ 160ರಷ್ಟು ಮಹಿಳಾ ಆಟಗಾರರು ಭಾಗವಹಿಸಲಿದ್ದಾರೆ. ಯು.ಎಸ್. ಓಪನ್ 2025 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗೆದ್ದಿರುವ, ಮಂಗಳೂರಿನವರೇ ಆದ ಆಯುಷ್ ಶೆಟ್ಟಿ ಅವರನ್ನೂ ಆಹ್ವಾನಿಸುತ್ತಿದ್ದೇವೆ' ಎಂದರು. ಮಂಗಳೂರಿನಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಆಟಗಾರರು, ತೀರ್ಪುಗಾರರು ಸೇರಿದಂತೆ ವಿವಿಧ ರಾಷ್ಟ್ರಗಳ ಸುಮಾರು 600ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ. ಸುಮಾರು 2.5 ನಿಂದ 3 ಕೋಟಿ ವೆಚ್ಚವಾಗಲಿದ್ದು, ಸರಕಾರದಿಂದ ಅನುದಾನಕ್ಕಾಗಿ ವಿನಂತಿಸಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂತೋಷ್ ಕುಮಾರ್ ಶೆಟ್ಟಿ, ಕೆ ಅಶೋಕ್, ಕೇಶವಮೂರ್ತಿ, ಸುಧಾಕರ್, ಸುಪ್ರಿತ್ ಆಳ್ವಾ, ಲಕ್ಷ್ಮಿ ಸುವರ್ಣ, ಅಶೋಕ್, ದಿಲೀಪ್ ಕುಮಾರ್, ರಿಯಾಜ್ ಹುಸೈನ್ ಉಪಸ್ಥಿತರಿದ್ದರು.