ಮಂಗಳೂರು: ಗಣೇಶ ಹಬ್ಬ ಪ್ರಾರಂಭವಾಗುವ ಸಂದರ್ಭದಲ್ಲಿ ಧ್ವನಿವರ್ಧಕ ಒದಗಿಸುವವರು ಕಾರ್ಯಕ್ರಮಗಳಿಗೆ ಧ್ವನಿವರ್ಧಕ ಒದಗಿಸಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಹಲವರಿಗೆ ನೋಟೀಸು ನೀಡಲಾಗಿ, ಧ್ವನಿವರ್ಧಕ ಸಾಮಾಗ್ರಿಗಳನ್ನು ಮುಟ್ಟುಗೋಲು ಹಾಕಿ ಕೇಸು ದಾಖಲಿಸಿರುವುದಾಗಿ ತಿಳಿದು ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ನಾಟಕ ತಂಡಗಳು ನಾಟಕ ಪ್ರದರ್ಶನ ನೀಡಲು ಸಾಧ್ಯವಾಗದೆ ಇಕ್ಕಟ್ಟಿಗೆ ಸಿಲುಕಿ ಒದ್ದಾಡುವ ಪರಿಸ್ಥಿತಿ ಬಂದಿದೆ. ರಾತ್ರಿ 10.30ಕ್ಕೆ ಯಾವುದೇ ಕಾರ್ಯಕ್ರಮ ಮುಗಿಸಲು ಸಾಧ್ಯವಾಗುವುದಿಲ್ಲ. ಒಂದು ನಾಟಕ ಪ್ರಾರಂಭವಾದರೆ ಅರ್ಧದಲ್ಲಿ ನಾಟಕ ನಿಲ್ಲಿಸುವುದು ಸರಿಯಲ್ಲ. ತುಳುನಾಡಲ್ಲಿ ನಾಟಕ, ಯಕ್ಷಗಾನ, ನೇಮಕೋಲ ಇತ್ಯಾದಿಗಳು ನಡೆಯುವುದೇ ರಾತ್ರಿ ಹೊತ್ತಲ್ಲಿ. ಈ ಎಲ್ಲಾ ಉತ್ಸವಗಳಿಗೆ ಸಮಯದ ಮಿತಿ ಹಾಗೂ ಶಬ್ದ ಬಳಕೆಯ ಮಿತಿ ಹೇರುವುದು ಸರಿಯಲ್ಲ ಎಂದು ತುಳುನಾಟಕ ಕಲಾವಿದರ ಒಕ್ಕೂಟ ದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಕುಮಾರ್ ಮಲ್ಲೂರು ಹೇಳಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಂಬರುವ ಗಣೇಶ ಹಬ್ಬದಿಂದ ತೊಡಗಿ ಮೇ ತಿಂಗಳ ಅಂತ್ಯದವರೆಗೆ ನಿರಂತರ ನಾಟಕ ಪ್ರದರ್ಶನೆಗಳು ನಾಟಕಗಳು ಪ್ರೇಕ್ಷಕರನ್ನು ತಲುಪಬೇಕಾದರೆ ಧ್ವನಿವರ್ಧಕ ಅತ್ಯವಶ್ಯಕವಾಗಿರುತ್ತದೆ. ನಾಟಕ, ಯಕ್ಷಗಾನ, ಸಂಗೀತ ಕಾರ್ಯಕ್ರಮಗಳು, ನೃತ್ಯ ಪ್ರದರ್ಶನಗಳು ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಗಳು ನಿರಂತರವಾಗಿ ನಡೆಯಬೇಕಾದರೆ ಧ್ವನಿವರ್ಧಕದ ಬಳಕೆ ಬಹು ಮುಖ್ಯ ಪಾತ್ರವಹಿಸುತ್ತದೆ ಎಂದರು.
ನಾಟಕಗಳಿಗೆ ಪೂರಕವಾದ ಧ್ವನಿ ಬಳಕೆ, ಸಂಗೀತ ಬಳಕೆಗೆ ನಿಗದಿಪಡಿಸಿರುವ 50-65 ಡಿಸಿಬಲ್ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಸೀಮಿತವೇ ರಾಜಧಾನಿಯಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳಿಗೆ ಈ ಮಿತಿ ಹೇರಿರುವುದು ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಹಬ್ಬಹರಿದಿನಗಳಲ್ಲಿ ಮಾತ್ರವಲ್ಲದೆ ನಾಟಕಗಳು ವರ್ಷಪೂರ್ತಿ ನಿರಂತರ ನಡೆಯುತ್ತಾ ಬರುತ್ತಿದೆ. ಹಾಗಾಗಿ ನಾಟಕಗಳಿಗೆ ಬಳಸುವ ಧ್ವನಿವರ್ಧಕಗಳಿಗೆ ಬೇಕಾದ ಪ್ರಮಾಣದಲ್ಲಿ ಧ್ವನಿವರ್ಧಕಗಳನ್ನು ಬಳಸುವರೇ ಹಾಗೂ ರಾತ್ರಿ ಸಮಯದ ಮಿತಿಗೆ ವಿನಾಯಿತಿ ನೀಡುವಂತೆ, ಜಿಲ್ಲಾಡಳಿತವನ್ನು ವಿನಂತಿಸುತ್ತೇವೆ ಎಂದರು.
ತುಳುವಾಟಕ ಕಲಾವಿದರ ಒಕ್ಕೂಟದ ಕಾರ್ಯವ್ಯಾಪ್ತಿಯು ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು, ಜಿಲ್ಲೆಗಳಲ್ಲಿ ವಿಸ್ತರಿಸಿದ್ದು, ತುಳುನಾಟಕ ರಂಗದ ಹಾಗೂ ಕಲಾವಿದರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿರುವ ಒಕ್ಕೂಟವಾಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ಸುಮಾರು 75ಕ್ಕೂ ಹೆಚ್ಚಿನ ನಾಟಕ ತಂಡಗಳಿದ್ದು, 300ಕ್ಕೂ ಕಲಾವಿದರು, ತಂತ್ರಜ್ಞರು, ಸಂಗೀತಗಾರರು, ಪ್ರಸಾದನ, ವೇಷಭೂಷಣ, ನೃತ್ಯಜೋಡಣೆ ಮುಂತಾದ ಶಾಸಕ ಸಂಬಂಧಿ ಕೆಲಸಗಳಲ್ಲಿ ಜೀವನ ನಿರ್ವಹಣೆ ಮಾಡಿಕೊಂಡು ನಾಟಕವನ್ನೇ ನಂಬಿಕೊಂಡು ಬದುಕುವವರಿರುತ್ತಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ವಿಜಯ ಕುಮಾರ್ ಕೊಡಿಯಾಲ್ ಬೈಲ್, ದೇವದಾಸ್ ಕಾಪಿಕಾಡ್, ಲಂಚುಲಾಲ್, ಗೋಕುಲ್ ಕದ್ರಿ ಉಪಸ್ಥಿತರಿದ್ದರು.