ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತವು ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗ ದೊಂದಿಗೆ ಸಾಂಸ್ಕೃತಿಕ, ಕ್ರೀಡಾ ಮತ್ತು ಮನ ರಂಜನಾ ಚಟುವಟಿಕೆಗಳ ಸಮಾಗಮ ವಾದ ಕರಾವಳಿ ಉತ್ಸವ 2025-26 ನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಚ್.ವಿ.ದರ್ಶನ್ ತಿಳಿಸಿದರು.
ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಉತ್ಸವವು ಡಿ.20ರಿಂದ 2026ರ ಜ.4ರ ವರೆಗೆ ಕರಾವಳಿ ಉತ್ಸವ ಮೈದಾನ, ಕದ್ರಿ ಪಾರ್ಕ್ ಮತ್ತು ನಗರದ ಕಡಲ ತೀರಗಳಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಡಿ.20ರಂದು ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಧಾನಸಭಾ ಸಭಾಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಜಿಲ್ಲೆಯ ಎಲ್ಲ ಶಾಸಕರು, ಎಲ್ಲ ವಿಧಾನ ಪರಿಷತ್ ನ ಸದಸ್ಯರು, ವಿವಿಧ ಅಕಾಡೆಮಿ, ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರ ಉಪಸ್ಥಿತಿಯಲ್ಲಿ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ.
ಉತ್ಸವದ ಅವಧಿಯಾದ್ಯಂತ ಕರಾವಳಿ ಉತ್ಸವ ಮೈದಾನದಲ್ಲಿ ವಿವಿಧ ಮಳಿಗೆಗಳು, ಪ್ರದರ್ಶನಗಳು ಮತ್ತು ಅಮ್ಯೂಸ್ ಮೆಂಟ್ ಪಾರ್ಕ್ ಸಾರ್ವಜನಿಕರಿಗಾಗಿ ಲಭ್ಯವಿರಲಿದೆ. ಡಿ.20ರಿಂದ 2026ರ ಜ.4ರವರೆಗೆ ಪ್ರತಿ ಶನಿವಾರ ಮತ್ತು ಭಾನುವಾರ ಕರಾವಳಿ ಉತ್ಸವ ಮೈದಾನದ ವೇದಿಕೆ ಯಲ್ಲಿ ಕರಾವಳಿಯ ಕಲೆ ಮತ್ತು ಸಾಂಸ್ಕೃತಿಕ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.ಜ.3 ಹಾಗೂ ಜ.4ರಂದು ಕಡಲತೀರದಲ್ಲಿ ಸ್ಯಾಂಡಲ್ ವುಡ್ ಹಾಗೂ ಬಾಲಿವುಡ್ ಖ್ಯಾತ ಕಲಾವಿದರಿಂದ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಉತ್ಸವದ ಮುಂದುವರಿದ ಭಾಗವಾಗಿ ಜನವರಿ ಮತ್ತು ಫೆಬ್ರವರಿಯಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಕಲೆ ಮತ್ತು ಸಂಸ್ಕೃತಿಯ ಅಂಗವಾಗಿ ಜ.9ರಿಂದ ಜ.11ರವರೆಗೆ ಕದ್ರಿ ಪಾರ್ಕ್ ರಸ್ತೆಯಲ್ಲಿ ಶರಧಿ ಪ್ರತಿಷ್ಠಾನದ ಸಹಯೋಗದೊಂದಿಗೆ ಚಿತ್ರ ಶಿಲ್ಪ ನೃತ್ಯ ಮೇಳ ಕಲಾ ಪರ್ಬ ನಡೆಯಲಿದೆ. ಕದ್ರಿ ಪಾರ್ಕ್ (ತೋಟಗಾರಿಕೆ ಇಲಾಖೆ)ಯ ವತಿ ಯಿಂದ ಜನವರಿ 26ರಂದು ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಕ್ರೀಡೆ ಸಂಬಂಧಿಸಿದಂತೆ ಟ್ರಯತ್ಲಾನ್ ಜ.9ರಿಂದ ಜ.11ರವರೆಗೆ ತಣ್ಣೀರುಬಾವಿ ಬೀಚ್ (ತಪಸ್ಯಾ ಫೌಂಡೇಷನ್ ಸಹಯೋಗದಲ್ಲಿ ನಡೆಯಲಿದೆ ಎಂದರು. ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಜ17 ಮತ್ತು 18ರಂದು ತಣ್ಣೀರು ಬಾವಿ ಬೀಚ್ ನಲ್ಲಿ ನಡೆಯಲಿದೆ. ಜ.23ರಿಂದ ಜ.25ರವರೆಗೆ ಬೀಚ್ ಉತ್ಸವ ನಡೆಯಲಿದ್ದು, ವಾಟರ್ ಸ್ಪೋರ್ಟ್ಸ್, ಸ್ಯಾಂಡ್ ಆರ್ಟ್, ಬೀಚ್ ಯೋಗ ಸೇರಿ ಅನೇಕ ಕಾರ್ಯಕ್ರಮ ಗಳು ನಡೆಯಲಿವೆ.
ವೈನ್-ಚೀಸ್-ಕೇಶ್ ಫೆಸ್ಟ್ ಪಣಂಬೂರು ಕಡಲತೀರದಲ್ಲಿ 2025 ಡಿಸೆಂಬರ್ ಕೊನೆಯ ವಾರದಲ್ಲಿ ನಡೆಯಲಿದ್ದು, ಜ.30ಮತ್ತು 31ರಂದು ಫುಡ್ ಸ್ಟ್ರೀಟ್ ಕದ್ರಿ ಪಾರ್ಕ್ ರೋಡ್ ಬಳಿ ನಡೆಯಲಿದೆ.ಜನವರಿ ಕೊನೆಯ ವಾರದಲ್ಲಿ ನಗರದ ಕೇಂದ್ರ ಗ್ರಂಥಾಲಯದಲ್ಲಿ ಪುಸ್ತಕ ಮೇಳ, ಭಾರತ್ ಮಾಲ್ ನ ಬಿಗ್ ಸಿನೆಮಾಸ್ನಲ್ಲಿ ಫಿಲ್ಡ್ ಫೆಸ್ಟಿವಲ್, ಕದ್ರಿ ಪಾರ್ಕ್ನಲ್ಲಿ ಡಾಗ್ ಶೋ, ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಹೆಲಿ ರೈಡ್ ನಡೆಸುವ ಚಿಂತನೆ ಇದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.